ಜೀವ ದನಿ

February 23, 2008

ಕೆಂಪು ಜುಟ್ಟಿನ ಹುಂಜ

Filed under: ಅಜ್ಜಿ ಕಥೆ — jeevadani @ 7:24 am

ಅವರಿಬ್ಬರಿದ್ದರು- ಪುಟಾಣಿ ಅಣ್ಣ, ಪುಟ್ಟ ತಂಗಿ. ಇಬ್ಬರಂದರೆ, ಇಬ್ಬರೇ. ಪೂರಾ ಅನಾಥರು. ಹಾ! ಅವರ ಹತ್ತಿರ  ಕೆಂಪು ಜುಟ್ಟಿನಹುಂಜವೊಂದಿತ್ತು. ಅದೆಂದರೆ ಇಬ್ಬರಿಗೂ ಬಹಳ ಪ್ರೀತಿ.
ಒಂದು ದಿನ ತಂಗಿಗೆ ವಿಪರೀತ ಹಸಿವಾಯ್ತು. ಮನೇಲಿ ತಿನ್ನಲಿಕ್ಕೆ ಏನೂ ಇಲ್ಲ! ಸರಿ. ಅಣ್ಣ ಮನೆಯ ಮೂಲೆಮೂಲೆ ಹುಡುಕಿದ. ಕಣಜದ ಬುಡದಲ್ಲೊಂದಷ್ಟು ಗೋಧಿಕಾಳು ಸಿಕ್ಕವು. ಅದನ್ನೇ ಬೀಸಿ ತಂಗಿಗೆ ಚಪಾತಿ ಮಾಡಿಕೊಡುವಾ ಅಂತ ಅಣ್ಣ ಅವನ್ನು ಒಟ್ಟುಮಾಡಿದ. ಇನ್ನೇನು ಬೀಸಬೇಕು, ಹುಂಜ ಅವನನ್ನ ತಡೆಯಿತು. ಒಂದು ಕಾಳು ಗೋಧಿಯನ್ನ ಬಿತ್ತಲು ಹೇಳಿತು. ಹುಡುಗ ಹಾಗೇ ಮಾಡಿದ.
ಮಾರನೆ ದಿನ ಬಾಗಿಲು ತೆರೆದಾಗ ನೋಡುವುದೇನು? ಅಂವ ಬಿತ್ತಿದ ಗೋಧಿಕಾಳು ಮುಗಿಲು ಮೀರಿ ಬೆಳೆದಿತ್ತು. ಅಂಗಳ ತುಂಬ ಹರಡಿತ್ತು ಅದರ ದಪ್ಪ ಕಾಂಡ. ಹುಡುಗನಿಗೆ ಕುತೂಹಲ ತಡೆಯದೆ ಸರಸರನೆ ಕಾಂಡವೇರುತ್ತ ಹೋದ. ಹೋಗುತ್ತ ಹೋಗುತ್ತ ಮೋಡಗಳನ್ನೂ ದಾಟಿ, ಆಕಾಶದ ನೀಲಿಯನ್ನೂ ದಾಟಿ…. ಗೋಧಿ ಗಿಡದ ತುದಿ ಮುಗಿಯುವಲ್ಲಿ ಒಂದು ಮನೆಯ ಎದುರು ಬಂದು ನಿಂತ.
ಆ ಮನೆಯೊಳಗಿಂದ ಘಮಘಮ ವಾಸನೆ…. ಹುಡುಗ ಹೋಗಿ ನೋಡುತ್ತಾನೆ…. ಒಂದು ಮಾಟಾಗಾತಿ ಮುದುಕಿ ಬೀಸೇಕಲ್ಲು ಬೀಸುತ್ತ ಕುಳಿತಿದೆ. ಅದರಿಂದ ದಂಡಿಯಾಗಿ ದೋಸೆಗಳು, ಕಡಬುಗಳು, ಹೋಳಿಗೆ, ಚಕ್ಕುಲಿ, ಕೋಡುಬಳೆ…
ಆಹ್! ಸೊರಸೊರನೆ ಬಾಯಲ್ಲಿ ನೀರೂರಿತು ಹುಡುಗನಿಗೆ!!
ಹಾಗೇ ನೋಡುತ್ತ ನಿಂತವನಿಗೆ ಮುದುಇಯ ಎಡಗಣ್ಣು ಕುರುಡು ಅಂತ ಗೊತ್ತಾಯಿತು. ಅದಕ್ಕೇ, ಕಲ್ಳಬೆಕ್ಕಿನ ಹಾಗೆ ಹೆಜ್ಜೆಯಿಡುತ್ತ ಎಡಬದಿಯಿಂದಲೇ ಮೆಲ್ಲನೆ ನುಸುಳಿ ಅಂಗಿಯನ್ನ ಕೊಟ್ಟೆಯ ಹಾಗೆ ಮಾಡಿಕೊಂಡು ಕೈಲಾದಷ್ಟು ತಿಂಡಿಯನ್ನು ಬಾಚಿಬಾಚಿ ತುಂಬಿಕೊಂಡ. ಮತ್ತೆ ಸರಸರನೆ ಕಾಂಡ ಇಳಿದು ಮನೆ ಸೇರಿದ.
ಅಣ್ಣ ತಂಗಿ ಹೊಟ್ಟೆ ತುಂಬ ತಿಂಡಿಗಳನ್ನು ತಿಂದರು. ಕೆಂಪುಜುಟ್ಟಿನ ಹುಂಜವೂ ಕೊಕ್ಕೊಕ್ಕೋ ಅನ್ನುತ್ತ ಕುಕ್ಕಿ ಕುಕ್ಕಿ ತಿಂದಿತು.

pol-14cock-a-doodle-doo-posters.jpg

ಮತ್ತೆ ಮಾರನೇ ದಿನವೂ ಹುಡುಗ ಕಾಂಡವೇರಿ ಮಾಟಾಗಾತಿಯ ಮನೆಯಿಂದ ತಿಂಡಿ ಹೊತ್ತು ತಂದ. ಹೀಗೇ ನಾಲ್ಕೈದು ದಿನ ಸಾಗಿತು.
ಅದೊಂದು ದಿನ ಒಕ್ಕಣ್ಣಿನ ಮಾಟಗಾತಿ ತನ್ನ ಕುರುಡನ್ನ ಎಡದಿಂದ ಬಲಗಣ್ಣಿಗೆ ಬದಲಿಸಿಕೊಂಡು ಕುಂತಿತ್ತು. ದಿನದಿನವೂ ತಾನು ಬೀಸಿ ಪಡೆದ ತಿಂಡಿಯಲ್ಲಿ ಕಡಿಮೆಯಾಗ್ತಿದೆಯಲ್ಲ ಅಂತ ಅದಕ್ಕೆ ಅನುಮಾನ. ಎಂದಿನಮ್ತೆ ತಿಂಡಿ ಕದಿಯಲು ಹೋದ ಹುಡುಗ ಸಿಕ್ಕಿಬಿದ್ದ!
ಕಟಕಟ ಹಲ್ಲುಕಡಿಯುತ್ತ ಮಾಟಗಾತಿ “ಹುಡುಗಾ! ನೀನೇಯೋ ಇಷ್ಟು ದಿನದಿಂದ ನನ್ನ ತಿಂಡಿಯನ್ನ ಕದೀತಿದ್ದಿದ್ದು? ತಡಿ! ನಿಂಗೆ ತಕ್ಕ ಶಾಸ್ತಿ ಮಾಡ್ತೀನಿ!!” ಅಂತ ಕೂಗಾಡಿತು. ಹಂಡೆಯ ನೀರು ಕಾಯಿಸಲಿಕ್ಕೆ ಹುಡುಗನ್ನೇ ಕಟ್ಟಿಗೆ ಹಾಗೆ ಉರಿಸ್ತೀನಿ ಅಂದುಕೊಂಡಿತು ಮುದುಕಿ. ಸೀದಾ ನೀರೊಲೆ ಹತ್ತಿರ ಕರಕೊಂಡು ಹೋಗಿ ಒಲೆಯೊಳಗೆ ತೂರಲು ಹೇಲೀತು. ಇಷ್ಟೆಲ್ಲ ಅದರೂ ನಮ್ಮ ಹುಡುಗ ಸ್ವಲ್ಪವೂ ಹೆದರಲಿಲ್ಲ. ಒಲೆ ಹತ್ತಿರ ಹೋಗಿ ತಾನು ಅದರಲ್ಲಿ ಹಿಡಿಸೋಲ್ಲ ಅಂತ ನಾಟಕವಾಡಿದ. ಮುದುಕಿ ರೇಗಿ, ಮೈ ಮಡಚಿ ತೂರಿಕೋ ಹುಡುಗಾ ಅಂತು. ಊಹೂಂ. ನಮ್ಮ ಹುಡುಗನ ನಾಟಕವೋ ನಾಟಕ! ಕೊನೆಗೆ, “ನೀನೇ ತೋರಿಸು ಮುದುಕೀ, ಹೇಗೆ ತೂರಬೇಕು ಅಂತ?” ಅಂದ. ಸರಿ. ಮುದುಕಿ ಒಲೆಯೊಳಗೆ ತೂರಿಕೊಂಡಳು. ಹುಡುಗ ಅದೇ ಸಮಯ ಅನ್ನುತ್ತ, ಸೀಮೆ ಎಣ್ಣೆ ಸುರಿದು ಬೆಂಕಿ ಕಡ್ಡಿ ಗೀರಿ ಮಾಟಗಾತಿಯನ್ನ ಸುಟುಬಿಟ್ಟ. ಆಮೇಲೆ ಸೀದಾ ಮಾಯದ ಬೀಸೇಕಲ್ಲನ್ನ ಹಿಡಿದು ಗೋಧಿ ಗಿಡ ಇಳಿದು ಮನೆ ಸೇರಿದ. ಆಮೇಲೆ ಅಣ್ಣ ತಂಗಿ ಸೇರಿ ಗಿಡದ ಕಾಂಡ ಕತ್ತರಿಸಿ ಹಾಕಿದರು!
ಆಮೆಲೆ, ದಿನದಿನವೂ ಅಣ್ಣ ತಂಗಿ ಥರಥರಾವರಿ ತಿಂಡಿ ತಿನ್ನುತ್ತ ಸುಖವಾಗಿದ್ದರು ಅಂತ ಕಥೆ ಮುಗಿಸಿಬಿಡಬಹುದಿತ್ತು! ಆದರೆ ಹಾಗಾಗಲಿಲ್ಲ!!
ಆ ಊರಲ್ಲೊಬ್ಬ ದುಷ್ಟ ರಾಜ. ಅವನಿಗೆ ಅಣ್ಣ ತಂಗಿಯರ ಹತ್ತಿರ ಮಾಯದ ಬೀಸೇಕಲ್ಲಿರುವ ಸಂಗತಿ ತಿಳಿಯಿತು. ಆ ಮಕ್ಕಳಿಂದ ಅವನು ಅದನ್ನ ಕಿತ್ತುಕೊಳ್ಳಲು ಉಪಾಯ ಮಾಡಿದ. ಬೀಸೇಕಲ್ಲನ್ನು ನೋಡಿಕೊಡುವುದಾಗ ಅದನ್ನ ತೆಗೆದುಕೊಂಡು ಬೇರೆಯದೇ ಒಂದನ್ನ ಕಳಿಸಿಕೊಟ್ಟ.
ಎಂದಿನಂತೆ ಮಕ್ಕಳು ತಿಂಡಿಗಾಗಿ ಕಲ್ಲು ಬೀಸುತ್ತಾರೆ, ಅಲ್ಲೇನಿದೆ!? ಧೂರ್ತ ರಾಜ ನ್ಯಾಯ ಕೇಳಲು ಬಂದ ಅಣ್ಣ ತಂಗಿಯನ್ನ ಗಡೀಪಾರು ಮಾಡಿಬಿಟ್ಟ.

ಸರಿ. ನಮ್ಮ ಕೆಂಪುಜುಟ್ಟಿನ ಹುಂಜ ಈಗ ಬೀದಿಗ ಬಂತು. ಬಂದು ಬೇಲಿಗಳ ಮೇಲೆ ನಿಂತು ಜೋರಾಗಿ ಕೂಗತೊಡಗಿತು. “ಕೊಕ್ಕೊಕ್ಕೋ ಕೊಕ್ಕೊಕ್ಕೋ… ಈ ದುಷ್ಟ ರಾಜ ಪಾಪದ ಬಡ ಮಕ್ಕಳಿಗೆ ಮೋಸ ಮಾಡಿ ಅವರ ಬೀಸೇಕಲ್ಲು ಕಿತ್ತುಕೊಂಡಿದ್ದಾನೆ…ಅಲ್ಲಿ ಆ ಪಾಪದ ಮಕ್ಕಳು ಉಪವಸವಿದ್ದರೆ, ಇವನಿಲ್ಲಿ ಬಗೆಬಗೆಯ ಭಕ್ಷ್ಯ ತಿನ್ನುತ್ತಿದ್ದಾನೆ! ನಾಚಿಕೆಗೇಡು, ನಾಚಿಕೆಗೇಡು!!”
ಕೆಂಪು ಜುಟ್ಟಿನ ಹುಂಜದ ಮಾತು ಕೇಳಿ ಜನರು ಆಶ್ಚರ್ಯ ಪಟ್ಟರು. ಗುಸುಗುಸು ಮಾಡುತ್ತ ಹುಂಜದ ಬಳಿ ಹೋಗಿ ಏನು ಎತ್ತ ತಿಳಿದುಕೊಂಡರು.
ಹೀಗೆ ಕೆಂಪುಜುಟ್ಟಿನ ಹುಂಜ ಗಲ್ಲಿ ಗಲ್ಲಿಯಲ್ಲಿ ಕೊಕ್ಕೊಕ್ಕೋ ಅನ್ನುತ್ತ ರಾಜನ ವಿರುದ್ಧ ಕೂಗುತ್ತ ಕೊನೆಗೆ ರಾಜ ಬೀದಿಗೂ ಬಂತು. ಅಲ್ಲಿ ರಾಣಿಯ ಅಂತಃ ಪುರದ ಕಿಟಕಿ ಮೇಲೆ ನಿಂತು, “ಕೊಕ್ಕೊಕ್ಕೋ… ಮಕ್ಕಳ ಕೈಯಿಂದ ಬೀಸೇಕಲ್ಲು ಕಿತ್ತುಕೊಂಡ ರಾಜನ ಹೆಂಡತಿಯೇ…” ಅನ್ನುತ್ತ ರಾಣಿಯನ್ನು ಛೇಡಿಸಿತು. ರಾಣಿಗೆ ನಾಚಿಕೆಯಾಗಿ ರಾಜನೊಟ್ಟಿಗೆ ಜಗಳವಾಡಿದಳು.
ಆ ಹೊತ್ತಿಗೆ ಜನಗಳೂ ರಾಜನ ಬಗ್ಗೆ ಮಂತ್ರಿಯ ಬಳಿ ವಿಚಾರಿಸತೊಡಗಿದ್ದರು. ಅತ್ತ ಕೆಂಪುಜುಟ್ಟಿನ ಹುಂಜ ಮಾತ್ರ ತನ್ನ ಪಾಡಿಗೆ ಕೂಗು ಮುಂದುವರಿಸಿತ್ತು.
ರೇಜಿಗೆ ಬಿದ್ದ ರಾಜ ಹುಂಜವನ್ನ ಹಿಡಿಸಿ ಸೆರೆಮನೆಗೆ ಹಾಕಿಸಿದ. ಅದು ಅಲ್ಲೂ ತನ್ನ ಕೆಲಸ ಮುಂದುವರೆಸಿತು.
ಈಗಂತು ರಾಜನ ತಲೆ ಕೆಟ್ಟುಹೋಯ್ತು. ಅದನ್ನ ಕೊಯ್ದು ಸಾರು ಮಾಡಿ ಬಡಿಸುವಂತೆ ಆಜ್ಞೆ ಮಾಡಿದ. ಅಡುಗೆಯವರು ಕೂಗುತ್ತಿದ್ದ ಹುಂಜವನ್ನ ಕೊಯ್ದು ಮಸಾಲೆ ಅರೆದು ಸಾರು ಮಾಡಿದರು.
ಈಗ ರಾಜನಿಗೆ ಸಂತ್ರುಪ್ತಿ. ಖುಶಿಖುಶಿಯಾಗಿ ತಾನೊಬ್ಬನೇ ಅಷ್ಟೂ ಸಾರು ಸುರಿದುಕೊಂಡು ತಿಂದುಬಿಟ್ಟ!
ಊಟ ಮಾಡಿ ಮಲಗುವ ಕೋಣೆಗೆ ಹೋದ ರಾಜನ ಹೊಟ್ಟೆಯಿಂದ ಮತ್ತೆ ಹುಂಜದ ಕೂಗು!
“ಕೊಕ್ಕೊಕ್ಕೋ! ದುಷ್ಟ ರಾಜ ಮಕ್ಕಳಿಂದ ಬೀಸೇಕಲ್ಲು ಕಿತ್ತುಕೊಂಡ. ಕೆಂಪು ಜುಟ್ಟಿನ ಹುಂಜ- ನನ್ನನ್ನು ಸೆರೆಮನೆಗೆ ತಳ್ಳಿದ. ಈಗ ಈ ದುಷ್ಟ ನನ್ನನ್ನು ಬೇಯಿಸಿ ತಿಂದಿದ್ದಾನೆ! ಅಲ್ಲಿ ಬಡ ಮಕ್ಕಳು ಉಪವಾಸ ಬಿದ್ದಿದ್ದರೆ, ಇಲ್ಲಿ ರಾಜ ತಿಂದು ತೇಗುತ್ತಿದ್ದಾನೆ!”
ಈಗಂತೂ ರಾಜನಿಗೆ ಬೊಗಸೆ ನೀರಲ್ಲಿ ಮುಳುಗಿ ಸಾಯುವಷ್ಟು ನಾಚಿಕೆಯಾಯ್ತು. ಅವನು ಹೋದಲ್ಲಿ ಬಂದಲ್ಲೆಲ್ಲ ಕೆಂಪುಜುಟ್ಟಿನ ಹುಂಜದ ಕೊಕ್ಕೊಕ್ಕೋ ನಡೆದೇ ಇತ್ತು! ಕೈಕೈ ಹಿಸುಕಿಕೊಂಡ ರಾಜ, ಅವಮಾನ ತಾಳಲಾರದೆ ತಿಂದಿದ್ದೆಲ್ಲ ಕಕ್ಕಿ ಕೊಂಡ. ಕೆಂಪುಜುಟ್ಟಿನ ಹುಂಜ ಇಡಿಇಡಿಯಾಗಿ ಹೊರಬಂದು ಅರಮನೆ ಬೇಲಿಯತ್ತ ಹಾರಿಹೋಯ್ತು. ಮತ್ತೆ ತನ್ನ ಕೂಗು ಮುಂದುವರೆಸಿತು.
ಈಗಂತೂ ರಾಣಿ ರಾಜನನ್ನ ತರಾಟೆಗೆ ತೆಗೆದುಕೊಂಡಳು. ಬೀಸೇಕಲ್ಲು ಕೊಟ್ಟುಬಿಡು ಅಂತ ಬುದ್ಧಿ ಹೇಳಿದಳು. ಕೊನೆಗೂ ರಾಜ ಕೆಂಪುಜುಟ್ಟಿನ ಹುಂಜದ ಕಾಟಕ್ಕೆ ಬೇಸತ್ತು ಆ ಮಕ್ಕಳನ್ನು ಕರೆಸಿದ. ಅವರ ಬೀಸೇಕಲ್ಲು ಅವರಿಗೆ ಮರಳಿಸಿದ.

ಆಮೇಲಿಂದ ಅಣ್ನ ತಂಗಿ ದಿನವೂ ಬೀಸೆಕಲ್ಲು ಬೀಸಿ ಬೀಸಿ ರುಚಿರುಚಿಯಾದ ತಿಂಡಿಗಳನ್ನು ಪಡೆಯುತ್ತ, ಬಡವರಿಗೆಲ್ಲ ಹಂಚುತ್ತ ನೂರು ವರ್ಷ ಸುಖವಾಗಿದ್ದರು.
ಕೆಂಪುಜುಟ್ಟಿನ ಹುಂಜವೂ ರಾಜನ ಪ್ರಾರ್ಥನೆಗೆ ಒಪ್ಪಿ ಮುಂದೆ ಯಾವತ್ತೂ ಅವನ ವಿರುದ್ಧ ಕೂಗಲಿಲ್ಲ. ತಾನೂ ತಿಂಡಿಯಲ್ಲಿ ಪಾಲು ಪಡೆದು ಅಣ್ಣ ತಂಗಿಯರೊಟ್ಟಿಗೆ ಸುಖವಾಗಿ ಇದ್ದುಬಿಟ್ಟಿತು!

February 18, 2008

ರಾಮಾಯಣ- ಮೂರು ಪ್ರಶ್ನೆಗಳು… 1. ವಾಲಿ ವಧೆಯ ಅಂತರಂಗ

Filed under: ಇತಿಹಾಸ — jeevadani @ 11:35 am

ರಾಮನನ್ನು ರಾಮಾಯಣವನ್ನು ಹಳಿಯುವವರಿಗೆ ಯಾವ ಬಗೆಯಿಂದ ಗೂಡಾರ್ಥಗಳನ್ನ ವಿಶ್ಲೇಷಿಸಿ ಹೇಳಿದರೂ ಸಮಾಧಾನವಾಗದು. ಅಂಥವರು ತಮ್ಮ ಕೆಲವು ವಾದಗಳಲ್ಲಿ ‘ಹಾಗೆ ನಡೆದಿದ್ದು’ ಹೌದೆಂದೂ, ಎಂಥಾ ಅನ್ಯಾಯವೆಂದೂ ಬೊಬ್ಬಿಟ್ಟರೆ, ಕೆಲವೆದೆ, ಇಡಿಯ ಕಾವ್ಯವೇ ಕಟ್ಟು ಕಥೆ ಅಂದು ಮೂಗು ಮುರಿಯುತ್ತಾರೆ.

ಆದರೆ ಮಹಾಕಾವ್ಯಗಳನ್ನು ಮೇಲಮೇಲಕ್ಕೆ ಓದಿ, ಅವುಗಳ ಬಗ್ಗೆ ಗೌರವವಿದ್ದೂ ಅರ್ಥೈಸಿಕೊಳ್ಳಲಾಗದೆ ಅನುಮಾನದ ಹುತ್ತ ಕಟ್ಟಿಕೊಂಡು ಒದ್ದಾಡುವ ಸಂಸ್ಕಾರವಂತರೂ ಇರುತ್ತಾರೆ. ಇಂಥವರು ರಾಮನಾಗಲೀ ಕೃಷ್ಣನಾಗಲೀ ಮಾಡಿದ್ದನ್ನು ಅನ್ಯಾಯವೆಂದು ಹೇಳಲಾರರು; ಪ್ರತಿವಾದಿಗಳಿಗೆ ಸಮರ್ಥ ಉತ್ತರ ನೀಡಿ ಸುಮ್ಮ್ಜನಿರಿಸಲೂ ಆರರು.
ನಾನು ಈ ಎರಡನೆ ಸಾಲಿಗೆ ಸೇರಿದ್ದು. ಹಾಗೆ, ಈ ಕಾವ್ಯಗಳ ಪಾತ್ರಗಳಿಗೆ ನನ್ನದೇ ಆದ ಬೇರೆಯೇ ಬಗೆಯ ಚಿಂತನೆಯನ್ನ ಆರೋಪಿಸಿ ಬರೆಯುವುದು ನನ್ನ ಹವ್ಯಾಸವಾದರೂ ಅಂತರಂಗದಲ್ಲಿ ’ನಿಜ’ವಾದ ಸತ್ತ್ವ ಏನು ಎಂಬ ಕುತೂಹಲ ನನ್ನದಿತ್ತು. ಈ ನಿಟ್ಟಿನಲ್ಲಿ ರಾಮಾಯಣದ ಮೂರು ಮುಖ್ಯ ಪ್ರಶ್ನೆಗಳಾದ “ರಾಮ ವಾಲಿಯನ್ನ ಮರೆಯಲ್ಲೇಕೆ ಕೊಂದ?”, ಸೀತಾ ಪರಿತ್ಯಾಗ ಸಮುಚಿತವೇ” ಮತ್ತು ಸಂಬೂಕ ವಧೆ ಎಷ್ಟು ಸರಿ?”- ಇವುಗಳ ಬೆನ್ನು ಹತ್ತಿ ಹೊರಟಿದ್ದೆ. ಕೊನೆಗೆ ಸಮಾಧಾನಕರ ಅಂಶ ಸಿಕ್ಕಿದ್ದು, ಶ್ರೀ ಮಧ್ವಾಚಾರ್ಯರ ಸರ್ವ ಮೂಲ ಗ್ರಂಥಗಳಲ್ಲಿ! ಅದನ್ನ ನೇರಾನೇರ ಓದಿಲ್ಲ ನಾನು. ಅದನ್ನೆಲ್ಲ ಕ್ರೋಢೀಕರಿಸಿ ಮಾಧ್ವ ಮಹಾ ಮಂಡಲದವರು ಮಾಡಿದ ಹೊತ್ತಗಿಯಲ್ಲಿ, ಶ್ರೀ ವಿಶ್ವೇಶ ತೀರ್ಥರ ಪ್ರಸ್ತಾವನೆಯಲ್ಲಿ ಸಿಕ್ಕಿದ್ದು!
ಅಲ್ಲಿ ನೀಡಿರುವ ಉತ್ತರಗಳನ್ನ ( ಶ್ರೀ ವಿಶ್ವೇಶ ತೀರ್ಥರು ಬರೆದಿರುವಂತೆ) ಇಲ್ಲಿ ಯಥಾವತ್ ನಿರೂಪಿಸಲಾಗಿದೆ.

ಶ್ರೀ ರಾಮ ವಾಲಿಯನ್ನು ನೆರವಾಗಿ ನಿಂತು ಬಾಣ ಪ್ರಯೋಗಿಸದೇ ಮರೆಯಲ್ಲಿ ನಿಂತು ವಾಲಿಯನ್ನು ಕೊಂದಿದ್ದು ಸರಿಯೇ?

ವಾಲ್ಮೀಕಿ ರಾಮಾಯಣದಲ್ಲಿ ಶ್ರೀ ರಾಮನು ವಾಲಿಯನ್ನು ಕೊಲ್ಲುವ ನಿರ್ಧಾರ ಮಾಡಿದ್ದರ ಕಾರಣಗಳನ್ನು ಸ್ಪಷ್ಟವಾಗಿ ಹೇಳಲಾಗಿದೆ. ರಾವಣ ಹೆಗೆ ಸೀತಾದೇವಿಯನ್ನು ಅಪಹರಿಸಿದ್ದನೋ ಹಾಗೆಯೇ ವಾಲಿ ಕೂಡ ಸುಗ್ರೀವನ ಹೆಂಡತಿಯ ಮೇಲೆ ಬಲಾತ್ಕಾರವೆಸಗಿ ತನ್ನ ವಶ ಮಾಡಿಕೊಂಡ. ಈ ನಿಟ್ಟಿನಲ್ಲಿ ವಾಲಿ ಕೂಡ ರಾವಣನ ಸಮಾನ ಅಪರಾಧಿ. ಇಂಥಹ ದುರ್ವರ್ತನೆ ತೋರಿದವನನ್ನು ನಿಗ್ರಹಿಸುವುದರಲ್ಲಿ ತಪ್ಪೇನಿದೆ? ಶಕ್ತಿ ಪರೀಕ್ಷೆಗಾಗಿ ನಡೆಸುವ ಯುದ್ಧಗಳಲ್ಲಿ ಕ್ರಿಕೆಟ್ ಮುಂತಾದ ಆಟಗಳಾ ನಿಯಮದಂತೆ ಯುದ್ಧ ನಿಯಮವನ್ನೂ ಚಾಚೂ ತಪ್ಪದೆ ಅನುಸರಿಸಬೇಕು. ಆದರೆ ದುಷ್ಟರನ್ನು, ಅಧಾರ್ಮಿಕರನ್ನು ಶಿಕ್ಷಿಸುವಾಗ ಈ ನಿಯಮಗಳನ್ನು ಅನುಸರಿಸುವ ಅವಶ್ಯಕತೆಯಿಲ್ಲ. ಕಳ್ಳರು, ದರೋಡೆಕಾರರು ಮತ್ತು ಭಯೋತ್ಪಾದಕರನ್ನು ಹಿಡಿಯಲು ಯಾವುದೇ ತಂತ್ರಗಳನ್ನು ಅನುಸರಿಸಿದರೂ ತಪ್ಪೆನ್ನಿಸುವುದಿಲ್ಲವಶ್ಟೆ? ಆದುದರಿಂದ ಅತ್ಯಾಚಾರಿಯಾದ ವಾಲಿಯನ್ನು ರಾಮನು ಮರೆಯಲ್ಲಿ ನಿಂತು ಕೊಂದುದರಲ್ಲಿ ಯಾವುದೇ ನೈತಿಕ ಅಪರಾಧವಿಲ್ಲ. ಈ ಸಮರ್ಥನೆಯನ್ನು ವಾಲ್ಮೀಕಿ ರಾಮಾಯಣದಲ್ಲಿ ನಾವು ನೋದಬಹುದು.
ಇದೇ ವಾಲ್ಮೀಕಿ ರಾಮಾಯಣದಲ್ಲಿ ಮತ್ತೂ ಒಂದು ವಿಶಯವನ್ನು ಗಮನಿಸಬೇಕು. ಅದು, ಧರಾಶಾಯಿಯಾದ ವಾಲಿ ಮತ್ತು ಶ್ರೀರಾಮರ ಚರ್ಚೆ. ರಾಮನೊಂದಿಗೆ ಚರ್ಚಿಸಿದ ವಾಲಿಗೆ ತನ್ನ ತಪ್ಪಿನ ಅರಿವಗಿ ಪಶ್ಚಾತ್ತಾಪ ಪಡುತ್ತಾನೆ. ಆಗ ರಾಮನು ಆತನಿಗೆ ಜೀವದಾನ ನೀಡಿ ಬದುಕಿಸಬಲ್ಲೆ ಎಂದು ಆಹ್ವಾನವಿತ್ತಾಗ, ವಾಲಿ ಅದನ್ನು ನಿರಾಕರಿಸಿ ರಾಮ ಸನ್ನಿಧಿಯಲ್ಲಿ ದಿವ್ಯ ಮರಣವನ್ನು ಅಪೇಕ್ಷಿಸುತ್ತಾ ಶಾಂತನಾಗಿಯೇ ಸಾವನ್ನು ಸ್ವೀಕರಿಸುತ್ತಾನೆ.

ನನಗನ್ನಿಸಿದ್ದು: ನಮಗೆ ರಾಮಾಯಣ ಗೊತ್ತಿರುವುದು ವಾಲ್ಮೀಕಿ ರಾಮಾಯಣದ ಮೂಲಕವೇ. ಆನಂತರದಲ್ಲಿ ಅನೇಕಾನೇಕ ಪ್ರಕ್ಷೇಪಗಳು ಬಂದು ಮೂಲ ರಾಮಾಯಣ ಯಾವುದೆಂದೇ ತಿಳಿಯದಾಗುವ ಪರಿಸ್ಥಿತಿ ಬಂದಿದೆ. ನಾವು ಬೇಕಿದರೆ ನಮ್ಮ ನಮ್ಮ ಚಿಂತನೆಯ ಮೂಲಕ ವಾಲ್ಮೀಕಿ ರಾಮಾಯಣದಿಂದ ಮೂಲ ಪಾತ್ರ ಸನ್ನಿವೇಶಗಳನ್ನು ತೆಗೆದುಕೊಂಡು ಹೊಸತನ್ನು ಹೆಣೆಯೋಣ. ಆದರೆ ಅವಕ್ಕೆ ನಾವು ‘ಇತಿಹಾಸ’ದ ಹಣೆಪಟ್ಟಿ ಕೊದಲಾಅಗ್ದು. ಅದು ಮೂರ್ಖತನ ಕೂಡ. ರಾಮನ ಬಗ್ಗೆ, ರಾಮಾಯಣದ ಬಗ್ಗೆ ಮಾತಾಡುವಾಗ ವಾಲ್ಮೀಕಿ ರಾಮಾಯಣವೊಂದೇ ಮೂಲ, ಪ್ರಮಾಣ. ಹೀಗಾಗಿ ರಾಮ ವಾಲಿಯನ್ನು ಕೊಂದ ಎಂದು ರಾಮಾಯಣದ ಆಧಾರದ ಮೇಲೆ ಹೇಳುವ ನಾವು, ಯಾಕೆ ಹಾಗೆ ಮಾಡಿದ ಎನ್ನುವುದಕ್ಕೂ ಅಲ್ಲಿಯೇ ಉತ್ತರವನ್ನು ಹುಡುಕಬೇಕಲ್ಲವೆ?

ಸೀತಾ ಪರಿತ್ಯಾಗದ ಪ್ರಶ್ನೆ, ಮುಂದಿನ ಕಂತಿನಲ್ಲಿ…

February 16, 2008

ಮಾರಿಷೆ ಮತ್ತು ಹತ್ತು ಮಂದಿ ಪ್ರಚೇತರು

Filed under: ಪುರಾಣ — jeevadani @ 9:19 am

ಭೂಮಿಯಲ್ಲಿ ಋಷಿಗಳು ತಪಸ್ಸಿಗೆ ಕುಳಿತರೆ ಸಾಕು, ಇಂದ್ರ ಸಿಂಹಾಸನಕ್ಕೆ ನಡುಕ! ಪ್ರತಿ ಬಾರಿಯೂ ಇಂಥದನ್ನು ತಡೆಯಲು ಆತ ತನ್ನ ಅಪ್ಸರೆಯರನ್ನು ಅವರತ್ತ ಕಳುಹಿಸಿ ತಪೋಭಂಗ ಮಾಡುತ್ತಿದ್ದ. ಈ ಬಗೆಯ ಕಥೆಗಳಲ್ಲಿ ವಿಶ್ವಾಮಿತ್ರನ ತಪೋಭಂಗದ ಕಥೆ ಅತಿ ಜನಪ್ರಿಯ. ಅಂಥದೇ ಇಲ್ಲಿ, ಮತ್ತೊಂದು…

ಹೀಗೊಬ್ಬನಿದ್ದ ಕಂಡು ಮಹರ್ಷಿ. ಆತನೂ ಒಮ್ಮೆ ತಪಸ್ಸಿಗೆ ಕುಂತ. ಹೆದರಿದ ಇಂದ್ರ ಪ್ರಮ್ಲೋಚೆ ಎಂಬ ಅಪ್ಸರೆಯನ್ನು ತಪಸ್ಸು ಕೆಡಿಸಲೆಂದೇ ಕಳಿಸಿಕೊಟ್ಟ. ಪ್ರಮ್ಲೋಚೆಯ ರೂಪ ಲಾವಣ್ಯ ಕಂಡು ಮುನಿಯನ್ನು ಸೆಳೆದವು. ಇಂದ್ರನ ತಂತ್ರ ನೆರವೆರಿತು, ಪ್ರಮ್ಲೋಚೆಯಲ್ಲಿ ಮುನಿಯ  ತಪೋಸಂಚಯ ನಷ್ಟವಾಯಿತು. ಇಂಥ ದಿವ್ಯ ವೀರ್ಯದಿಂದ ಅತ್ಯದ್ಭುತ ಲಾವಣ್ಯದ ಹೆಣ್ಣು ಶಿಶು ಜನಿಸಿತು. ಎಂದಿನಂತೆ ಅಪ್ಸರೆ ಮಗುವನ್ನು ಅಲ್ಲಿಯೇ ಬಿಟ್ಟು ಹೊರಟುಹೋದಳು. ಇತ್ತ ಕಂಡು ಮುನಿ, ತನ್ನ ಶಕ್ತಿಯನ್ನು ಪುನಃ ಸಂಪಾದಿಸಲು ತಪಸ್ಸಿಗೆ ಕುಂತುಬಿಟ್ಟ.

ತಂದೆ ತಾಯಿಯರ ಉಪೇಕ್ಷೆಗೆ ಒಳಗಾದ ಮಗು ಕಾಡಿನಲ್ಲಿ ಒಂಟಿಯಾಗಿ ಹಸಿವು, ಚಳಿ ಗಾಳಿಯಿಂದ ತತ್ತರಿಸಿ ಒಂದೇಸಮನೆ ಅಳತೊಡಗಿತು. ಈ ಮಗುವನ್ನು ಕಂಡ ಚಂದ್ರದೇವ ತನ್ನ ಅಮೃತ ಕಿರಣಗಳನ್ನು ಊಡಿ ಮಗುವನ್ನು ಸಾಂತ್ವನಗೊಳಿಸಿದ. ತನ್ನ ಆಜ್ಞಾಪಾಲಕರಾದ ವೃಕ್ಷದೇವತೆಗಳಿಗೆ ಮಗುವಿನ ಪೋಷಣೆಯ ಜವಾಬ್ದಾರಿ ಕೊಟ್ಟ. ಹೀಗೆ ಕಂಡು- ಪ್ರಮ್ಲೋಚೆಯರ ಮಗಳಾದ ‘ಮಾರಿಷೆ’ಯು ವನದೇವಿಯ ಮಡಿಲಲ್ಲಿ ಬೆಳೆಯತೊಡಗಿದಳು.

ಪ್ರಾಚೀನ ಬರ್ಹಿ ಎಂಬೊಬ್ಬ ರಾಜನದು ಬೇರೆಯೇ ಕಥೆ. ಅದಿನ್ನೂ ದೊಡ್ಡ ಕಥೆ. ಅವನ ಹತ್ತು ಮಕ್ಕಳ ಹೆಸರೂ ’ಪ್ರಚೇತ’ರೆಂದೇ. ಆ ಮಕ್ಕಳು ಕೂಡ ತಪೋಸಂಪನ್ನರು. ಬ್ರಹ್ಮನ ಆದೇಶದ ಮೇರೆಗೆ ಆ ಹತ್ತೂ ಸಹೋದರರು  ಮಾರಿಷೆಯನ್ನು ಮದುವೆಯಾದರು!
ಮುಂದೆ ಮಾರಿಷೆಯ ಗರ್ಭದಲ್ಲಿ ಪ್ರಚೇತರು ’ದಕ್ಷ’ನನ್ನು ಪಡೆದರು.  ದಕ್ಷ, ಭೂಲೋಕದಲ್ಲಿ ಮಾನವ ಸಂತಾನವನ್ನು ವ್ಯಾಪಕಗೊಳಿಸಿ, ’ಪ್ರಜಾಪತಿ’ ಅನಿಸಿಕೊಂಡನು.

ಈತ ಹಿಂದೆ ದಾಕ್ಷಾಯಣಿಯ ತಂದೆಯಾಗಿ, ಅವಳ ಆತ್ಮಾಹುತಿಗೆ ಕಾರಣನಾಗಿ ಶಿವನಿಂದ ದಂಡನೆಗೊಳಗಾಗಿದ್ದನಲ್ಲ, ಅದೇ ದಕ್ಷ. ಶಿವ ಶಾಪದಿಂದ ಮತ್ತೆ ಭೂಮಿಯಲ್ಲಿ ಹುಟ್ಟಿಬಂದ. ಶಪಿತನಾದರೂ ಆತ ಬ್ರಹ್ಮನ ಮಗನಲ್ಲವೇ? ಭೂಮಿಯಲ್ಲಿ ಹುಟ್ಟಲು ಆತನಿಗೆ ಸತ್ತ್ವಯುತ ಕ್ಷೇತ್ರವೇ ಆಗಬೇಕಿತ್ತು. ಅದಕ್ಕೆಂದೇ ಕಂಡು-ಪ್ರಮ್ಲೋಚೆಯರ ಪ್ರಹಸನವನ್ನು ನಿಯತಿ ಏರ್ಪಡಿಸಿದ್ದಳು!

ಮುಂದೆ ಹತ್ತು ಮಂದಿ ಪ್ರಚೇತರು ಮಾರಿಷೆಯಲ್ಲಿ ವೀರ್ಯ ಪ್ರತಿಷ್ಟಾಪಿಸಿ ದಕ್ಷನನ್ನು ಪಡೆದರು.

ಈ ಕಥೆ ಭಾಗವತ ಪುರಾಣದ ನಾಲ್ಕನೆ ಸ್ಕಂಧದಲ್ಲಿ ಬರುತ್ತದೆ.

January 26, 2008

ನಭಗನ ಪುತ್ರ ನಾಭಾಗ

Filed under: ಪುರಾಣ — jeevadani @ 5:36 pm

ಭಾಗವತ ಪುರಾಣದಲ್ಲಿ ಮಹಾರಾಜ ನಭಗ ಮತ್ತವ ಮಗ ನಾಭಾಗನ ಕಥೆಯೊಂದು ಬರುತ್ತೆ.
ಅದು ಹೀಗಿದೆ.

ಮಹಾರಾಜ ನಭಗ, ನಾಭಾ ಹೆಸರಿನ ಮನುವಿನ ಪುತ್ರ. ಈ ನಭಗನ ಪುತ್ರರಲ್ಲೊಬ್ಬನಾದ ನಾಭಾಗ ದೀರ್ಘ ಕಾಲದವರೆಗೆ ಗುರುಕುಲದಲ್ಲಿ ವ್ಯಾಸಂಗ ಮಾಡುತ್ತಿದ್ದ. ಈ ಕಾಲದಲ್ಲಿ ಅವನ ಹಿರಿಯ ಸಹೋದರರು ನಾಭಾಗನು ಇಷ್ಟು ವರ್ಷವಾದರೂ ಮರಳಿಬಾರದಿದ್ದುದರಿಂದ ಆತನೆಲ್ಲೋ ಸಂನ್ಯಾಸಿಯಾಗುವ ವ್ರತ ಕೈಗೊಂಡಿರಬೇಕೆಂದು ತಿಳಿದು, ರಾಜ್ಯದಲ್ಲಿ ಅವನಿಗೆ ಪಾಲು ಕೊಡಬೇಕೆನ್ನುವುದನ್ನು ಪರಿಗಣಿಸದೆ ತಮ್ಮ ತಮ್ಮಲ್ಲೆ ಹಂಚಿಕೊಂಡುಬಿಟ್ಟರು. ನಾಭಾಗ ಹಿಂದಿರುಗಿದಾಗ ತಮ್ಮ ತಂದೆಯನ್ನೇ ಅವನ ಪಾಲಿನ ಆಸ್ತಿ ಎಂದು ಅವನ ಜೊತೆಯಲ್ಲಿ ನಭಗನನ್ನು ಕಳುಹಿಸಿಕೊಟ್ಟರು.

ತನ್ನ ಕಣ್ಣೆದುರೇ ನಾಭಾಗನನ್ನು ವಂಚಿಸಿದ ತನ್ನ ಮಕ್ಕಳ ಬಗ್ಗೆ ನಭಾಗನಿಗೆ ಬೇಸರವಾಯಿತು. ಅವನ ಮೇಲಿನ ಕರುಣೆಯಿಂದ ಎರಡು ವಿಶೇಷ ಮಂತ್ರಗಳನ್ನು ಅವನಿಗೆ ನೀಡಿ, “ಅಂಗೀರನ ವಂಶಸ್ಥರು ಈಗೊಂದು ಮಹಾ ಯಜ್ಞವನ್ನು ಕೈಗೊಂಡಿರುವರು. ಅವರೆಷ್ಟೇ ಬುದ್ಧಿಶಾಲಿಗಳಾಗಿದ್ದರೂ ಯಾಗದ ಪ್ರತಿ ಆರನೇ ದಿನ ಭ್ರಾಂತರಾಗಿ ಮಂತ್ರವನ್ನು ತಪ್ಪು ತಪ್ಪಾಗಿ ಹೇಳುವರು. ಆ ಸಮಯದಲ್ಲಿ ನೀನು ಅಲ್ಲಿ ಉಪಸ್ಥಿತನಿದ್ದು ಅದನ್ನು ಸರಿಪಡಿಸು. ತುಷ್ಟರಾಗುವ ಅವರು ಯಜ್ಞದ ನಂತರ ಉಳೀಯುವ ಸಂಪತ್ತನ್ನು ನಿನಗೆ ನೀಡುವರು” ಎಂದು ಸೂಚಿಸಿದನು.

ಅದರಂತೆ ನಾಭಾಗನು ಯಜ್ಞ ಶಾಲೆಗೆ ಹೋಗಿ ವೈಶ್ವದೇವನನ್ನು ಕುರಿತ ಮಂತ್ರಗಳನ್ನು ಪಟಿಸಿದನು. ಅಂಗೀರ ವಂಶಸ್ಥರು ಅವನಿಗೆ ಉಳಿದ ಸಂಪತ್ತನ್ನು ನೀಡುತ್ತಿರುವಾಗ ಉತ್ತರ ದಿಕ್ಕಿನಿಂದ ಕಪ್ಪು ಬಣ್ಣದ ವ್ಯಕ್ತಿಯೊಬ್ಬ ಅಲ್ಲಿಗೆ ಬಂದು, “ ಈ ಯಜ್ಞ ಸ್ಥಳದ ಎಲ್ಲ ಸಂಪತ್ತೂ ನನಗೆ ಸೇರಬೇಕು” ಎಂದು ತಡೆದನು.

ಕೊನೆಗೆ ಅವರಿಬ್ಬರೂ ವ್ಯಾಜ್ಯ ಪರಿಹಾರಕ್ಕಾಗಿ ನಭಗನನ್ನು ಆಶ್ರಯಿಸಿದರು. ನಡೆದ ಎಲ್ಲವನ್ನೂ ಕೂಲಂಕಷವಾಗಿ ವಿಚಾರಿಸಿದ ಆತನು ಯಜ್ಞ ನಡೆಸುವಾಗ ಋಷಿಗಳು ಎಲ್ಲ ಸಂಪತ್ತನ್ನೂ ಅದಾಗಲೇ ಶಿವನಿಗೆ ಅರ್ಪಿಸಿದ್ದನ್ನು ಮನಗಂಡನು. ಅದರಂತೆ, ಆ ಎಲ್ಲವನ್ನು ಆತನಿಗೇ ಅರ್ಪಿಸುವಂತೆ ಮಗನಿಗೆ ಹೇಳಿದನು. ಆ ಕಪ್ಪು ಬಣ್ಣದ ವ್ಯಕ್ತಿಯು ಶಿವನೇ ಆಗಿರಲು, ಸಹರ್ಷದಿಂದ ನಾಭಾಗನು ಸಂಪತ್ತನ್ನು ಶಿವನಿಗೆ ಅರ್ಪಿಸಿ ಕರುಣೆಗಾಗಿ ಯಾಚಿಸಿದನು.

ನಾಭಾಗನ ಸದ್ವರ್ತನೆಯಿಂದ ಸಂತಸಗೊಂಡ ಪರಶಿವ ಆತನ ಮೇಲೆ ಕೃಪೆದೋರಿ ಅದನ್ನು ಆತನಿಗೇ ಮರಳಿಸಿ, ಜೊತೆಗೆ ದಿವ್ಯ ಜ್ಞಾನವನ್ನೂ ಕರುಣಿಸಿ ಅಂತರ್ಧಾನನಾದನು.

- ಈ ಕಥೆ, ಭಾಗವತದ ೯ನೇ ಸ್ಕಂಧ, ೪ನೇ ಅಧ್ಯಾಯದಲ್ಲಿ ಬರುತ್ತದೆ. ಸಾತ್ತ್ವಿಕ ಮನಸ್ಸು, ಹಿರಿಯರ ಮಾತಿನಲ್ಲಿ ಗೌರವವಿರುವ ಯಾವ ವ್ಯಕ್ತಿಯೇ ಆದರೂ ವಿಶೇಷ ಕೃಪೆಗೆ ಪಾತ್ರನಾಗುತ್ತಾನೆ ಎನ್ನುವುದು ಈ ಕಥೆಯ ತಿರುಳು.

ಉಪಾಧಿಗಳಿಂದ ಮುಕ್ತಿ!

Filed under: ಝೆನ್ — jeevadani @ 5:20 pm

ಕ್ಯೋಟೋ ರಾಜ್ಯಪಾಲನೊಬ್ಬನಿಗೆ ಒಮ್ಮೆ ಝೆನ್ ಮಹಾಗುರು ಕೆಯಿಚುವನ್ನು ಭೇಟಿ ಮಾಡುವ ಮನಸ್ಸಾಯಿತು. ತೊಫುಕು ದೇವಾಲಯದಲ್ಲಿ ಉಪದೇಶ ಮಾಡುತ್ತಿದ್ದ ಕೆಯಿಚುವಿಗೆ ಆತ ಹೊರಗಿನಿಂದ ತನ್ನ ಗುರುತಿನ ಚೀಟಿ ಕಳಿಸಿದ. ಅದರಲ್ಲಿ ಹೀಗೆ ಬರೆದಿತ್ತು; ಕಿಟಾಗಕಿ, ಕ್ಯೋಟೋ ರಾಜ್ಯಪಾಲ.
ಅದನ್ನೋದಿದ ಕೆಯಿಚು, “ಇವರೊಂದಿಗೆ ನನಗೇನು ಕೆಲಸ? ನಾನು ಇವರನ್ನ ಭೇಟಿಯಾಗೋದಿಲ್ಲ” ಎಂದು ಚೀಟಿಯನ್ನು ವಾಪಸು ಕಳಿಸಿಬಿಟ್ಟ.
ಸೇವಕ ತಲೆ ತಗ್ಗಿಸಿ ನಿಂತು ರಾಜ್ಯಪಾಲನಿಗೆ ವರದಿ ಒಪ್ಪಿಸಿದ. ಈಗ ಆತ ಚೀಟಿ ತೆಗೆದುಕೊಂಡು ’ಕ್ಯೋಟೋ ರಾಜ್ಯಪಾಲ’ ಎನ್ನುವ ಪದಗಳಿಗೆ ಕಾಟೂ ಹಾಕಿ ಮತ್ತೆ ಕಳಿಸಿಕೊಟ್ಟ.
ಸೇವಕ ನೀಡಿದ ಚೀಟಿಯನ್ನು ನೋಡಿದ ಮಹಾಗುರು, “ಓ, ನಾನು ಕಿಟಾಗಕಿಯೊಂದಿಗೆ ಮಾತನಾಡೋದಿದೆ. ಅವರನ್ನ ಬರಹೇಳು” ಅಂದ!

ಅಗಸನ ಕತ್ತೆ, ಅಗಸನ ಕಲ್ಲು…

Filed under: ಅಜ್ಜಿ ಕಥೆ — jeevadani @ 5:16 pm

ಒಂದೂರಲ್ಲಿ ಒಬ್ಬ ಅಗಸ ಇದ್ದ. ಅವನ ಹೆಸ್ರು ಬಸ್ಯ. ಅವನ ಸಂಗಾತಿ ಸಿಂಗ, ಅವನ ನೆಚ್ಚಿನ ಕತ್ತೆಯೇ ಆಗಿತ್ತು. ಯಾವಾಗ್ಲೂ ಬಸ್ಯನ ಹಿಂದೆ ಸಿಂಗ, ಸಿಂಗನ ಮುಂದೆ ಬಸ್ಯ ಇರ್ಲೇಬೇಕು. ಹಾಂಗಿತ್ತು ಅವರ ದೋಸ್ತಿ.
ಒಂದಿನ ಬಸ್ಯ ಮತ್ತು ಸಿಂಗ ಅದೆಲ್ಲಿಗೂ ದೂರದೂರಿಗೆ ಹೊರಟ್ರು. ಹೋಗ್ತಾ ಹೋಗ್ತಾ ಕತ್ಲಾಯ್ತಾ, ಸರಿ. ಒಂದ್ ಮರದ್ ಕೆಳಗೆ ಅಡ್ಡದ್ರು. ಸಿಂಗ ತನ್ ಯಜಮಾನನ್ನ ಒಂದ್ ಕಥೆ ಹೇಳು, ಒಂದ್ ಕಥೆ ಹೇಳು ಅಂತ ಪೀಡಿಸ್ದ. ಆದ್ರೆ ಅಗಸಂಗೆ ಅದಾಗ್ಲೇ ಕಣ್ಣು ಕುಗುರ್ತಿತ್ತು. ಸಿಂಗನ ಹಟಕ್ಕೆ ಜಗ್ಗದೆ ಅಂವ ಹಾಗೇ ನಿದ್ದೆ ಹೋದ.

ಹೀಗೆ ಅಗಸ ಗಾಢ ನಿದ್ದೆಯಲ್ಲಿದ್ದಾಗ ಅವನ ಹೊಟ್ಟೇಲಿದ್ದ ನಾಲ್ಕು ಕಥೆಗಳು ಎದ್ದು ಬಂದು ಅವನ ಮೈಮೇಲೆ ಕೂತ್ಕೊಂಡ್ವು. ಕೂತು ಮಾತಾಡ್ಲಿಕ್ ಶುರು ಮಾಡಿದ್ವು. ಅವಕ್ಕೆ ತುಂಬ ಕೋಪ ಬಂದಿತ್ತು. “ ಅಲ್ಲ, ಚಿಕ್ಕಂದಿಂದ್ಲು ಈ ಅಗಸಂಗೆ ನಮ್ ವಿಷಯ ಚೆನ್ನಾಗ್ ಗೊತ್ತಿದೆ. ಆದ್ರೂ ಯಾರಿಗೂ ಇವ್ನು ನಮ್ ಬಗ್ಗೆ ಹೇಳೋಲ್ವಲ್ಲ ಯಾಕೆ? ಮತ್ಯಾಕೆ ನಾವು ಅವ್ನ ಹೊಟ್ಟೇಲಿರ್ಬೇಕು? ನಾವು ಅವನನ್ನ ಕೊಂದು ಬೇರೆಲ್ಲಿಗಾದ್ರೂ ಹೊರಟ್ ಹೋಗೋಣ” ಅಂತ ಮಾತಾಡ್ಕೊಂಡ್ವು. ಅವರ ಮಾತು ಸಿಂಗನಿಗೆ ಕೇಳಿಸ್ಬಿಡ್ತು. ಮುಂದೇನು ಮಾತಾಡ್ತಾರೋ ಅಂತ ನಿದ್ದೆ ನಟಿಸ್ತ ಅವುಗಳ ಮಾತನ್ನ ಕಿವಿಕೊಟ್ಟು ಕೇಳಿಸ್ಕೊಂಡ. ಮೊದಲ ಕಥೆ ಹೇಳ್ತು. “ಈ ಅಗಸ ಬೆಳಗ್ಗೆ ಎದ್ದು ಬುತ್ತಿ ಬಿಚ್ಚಿ ತಿನ್ನೋಕೆ ಕೂರ್ತಾನಲ್ಲ, ಆಗ ನಾನು ಮುಳ್ಳಾಗಿ ತುತ್ತಿನೊಳಗೆ ಸೇರ್ಕೊಂಡು ಅವನ ಗಂಟಲಿಗೆ ಚುಚ್ಚಿ ಕೊಲ್ತೇನೆ”. “ಒಂದು ವೇಳೆ ಅಂವ ಸಾಯದಿದ್ರೆ ನಾನು ಇದೇ ಮರದೊಳಗೆ ಸೇರ್ಕೊಂಡು ಅವನ ಮೇಲೆ ಬಿದ್ದು ಸಾಯಿಸ್ತೇನೆ” ಅಂತು ಎರಡನೆ ಕಥೆ. ಮೂರನೆಯದು, “ನಿಮ್ಮಿಬ್ಬರ ಕೈಲಿ ಆಗದಿದ್ರೆ ನಾನು ಇಲ್ಲೇ ಹತ್ತಿರ ಇರೋ ಆ ಹುತ್ತದಲ್ಲಿ ಹಾವಾಗಿ ಕಾದು ಕೂತು ಅವನನ್ನ ಕಚ್ತೀನೆ” ಅಂತು. ಕೊನೆಗೆ ನಾಲ್ಕನೇ ಕಥೆ, ಈ ಯಾವುದ್ರಿಂದ್ಲೂ ಅಂವ ಸಾಯ್ದೆ ಹೋದ್ರೆ, ಅಂವ ಹೊಳೆ ದಾಟ್ತಾನಲ್ಲ, ಆಗ ದೊಡ್ಡ ತೆರೆಯಾಗಿ ಬಂದು ಅವನನ್ನ ಕೊಚ್ಕೊಂಡು ಹೋಗ್ತೀನಿ” ಅಂತ ಹೇಳ್ತು.
ಅವುಗಳಲ್ಲಿ ಒಂದು ಕಥೆಗೆ ತಮ್ಮ ಮಾತನ್ನ ಯಾರಾದ್ರೂ ಕೇಳಿಸ್ಕೊಂಡ್ರೆ ಅನ್ನೋ ಅನುಮಾನ ಬಂತು. ನಾಲ್ಕೂ ಕಥೆಗಳು ಸೇರಿ, ಯಾರಾದ್ರೂ ಅಗಸನಿಗೆ ತಮ್ಮ ಮಾತುಗಳ್ನ ತಿಳಿಸಿದ್ರೆ ಅವ್ರು ಕಲ್ಲಾಗ್ತಾರೆ ಅಂತ ಶಾಪ ಕೊಟ್ವು.

ಬೆಳ್ಗಾಯ್ತು. ಹತ್ರ ಇದ್ದ ನದೀಲಿ ಮುಖ ತೊಳ್ಕೊಂಡ್ ಬಂದ ಅಗಸ ಬುತ್ತಿ ಬಿಚ್ಚಿ ತಿನ್ನೋಕೆ ಕೂತ. ಆಗ ಸಿಂಗ ಓಡಿ ಬಂದವ್ನೇ ತನ್ನ ಮೂತಿಯಿಂದ ಅನ್ನದ ಬಟ್ಟಲನ್ನ ತಳ್ಳಿ ಚೆಲ್ಲಿಬಿಟ್ಟ. ಸಿಟ್ಟಿಗೆದ್ದ ಅಗಸ ಇನ್ನೇನು ಹೊಡೀಬೇಕು ಅನ್ನುವಾಗ ಅವಂಗೆ ಚೆಲ್ಲಿದ ಅನ್ನದಲ್ಲಿ ಮುಳ್ಳುಗಳಿರೋದು ಕಾಣಿಸ್ತು.
ಈ ಸಂಗತಿಯಿಂದ ತಲೆಕೆಟ್ಟ ಅಗಸ ಇನ್ನೇನು ಸುಧಾರಿಸ್ಕೊಳ್ಬೇಕು ಅನ್ನುವಾಗ ಇದ್ದಕ್ಕಿದ್ದಹಾಗೇ ಓಡಿಬಂದ ಸಿಂಗ ತನ್ನ ಯಜಮಾನನ ಪಂಚೆ ಹಿಡಿದು ಎಳೆದು ಎಳೆದೂ ಎಲ್ಲಿಗೋ ಕರೆಯತೊಡಗಿದ. ಅಗಸನೂ ಸಿಟ್ಟಿಗೆದ್ದು ಹೊರಟ. ಇನ್ನೇನು ಅಂವ ಮರದ ಬುಡದಿಂದ ಎದ್ದಿರಬೇಕು, ಧೊಪ್ಪೆಂದು ಬಿದ್ದ ಸದ್ದು!
ಸರಿ. ಅಗಸ ಇನ್ನು ಅಲ್ಲಿಂದ ಹೊರಡೋದೇ ವಾಸಿ ಅಂದುಕೊಂಡ. ತನ್ನ ಬಟ್ಟೆಗಂಟು ಸರಿಂಆಡಿಕೊಳ್ಳತೊಡಗಿದ. ಅಲ್ಲೇ ಹತ್ತಿರವಿದ್ದ ಹುತ್ತದಿಂದ ಹಾವು ಹೊರಬಂತು. ಅದನ್ನೇ ಕಾಯ್ತಿದ್ದ ಸಿಂಗ, ತನ್ನ ಗೊರಸಿಂದ ಅದನ್ನ ತುಳಿತುಳಿದು ಕೊಂದು ಹಾಕಿದ.
ಅಗಸ ’ಭಲಾ’ ಅಂತ ಬೆನ್ನು ನೇವರಿಸಿ ಹೊಳೆಯತ್ತ ಹೊರಟ. ಅಲ್ಲೂ ಭಾರೀ ತೆರೆ ಬರೋದನ್ನ ನೋಡಿದ ಸಿಂಗ, ಯಜಮಾನನ್ನ ಬೆನ್ನ ಮೇಲೆ ಕೂರಿಸ್ಕೊಂಡು ಆಚೆ ದಡಕ್ಕೆ ಕರೆದೊಯ್ದ.

ಅಷ್ಟೂ ಹೊತ್ತು ಸುಮ್ಮನಿದ್ದ ಅಗಸ ಸಮಾಧಾನವಾದ ಮೇಲೆ ಸಿಂಗನ್ನ ಕೇಳ್ದ.“ ಪ್ರತಿ ಸಾರ್ತಿ ನೀನು ನನ್ ಜೀವ ಉಳಿಸ್ತಲೇ ಬಂದಿದೀಯ. ನಿಂಗೆ ನನ್ ವಿಷ್ಯ ಏನೋ ಗೊತ್ತಾಗಿದ್ದೆ. ಏನದು ಹೇಳು?”
ಊಹೂಂ… ಸಿಂಗ ಬಾಯಿ ಬಿಗಿದ್ಕೊಂಡು ನಿಂತುಬಿಟ್ಟ. ಅಗಸ ಪೀಡಿಸಿ ಪೀಡಿಸಿ ಕೇಳಿದಾಗ, ‘ಅದನ್ನ ಹೇಳಿದ್ರೆ ನಾನು ಕಲ್ಲಾಗಿಹೋಗ್ತೀನಿ’ ಅಂದ. ಆದ್ರೂ ಅಂವ ಬಿಡಲಿಲ್ಲ. ಹೇಳಲೇಬೇಕು ಅಂತ ಹಟ ಹಿಡಿದ. ಕೊನೆಗೆ ಸಿಂಗ ಕಥೆಗಳ ಮಾತನ್ನ ಹೇಳಿದ. ಹೇಳಿ ಮುಗೀತಲೇ ನಿಂತಲ್ಲಿ ಕಲ್ಲಾಗಿಹೋದ!

ನಾಲ್ಕು ನಾಲ್ಕು ಸಾರ್ತಿ ಜೀವ ಉಳಿಸಿದ ತನ್ನ ಪ್ರೀತಿಯ ಭಂಟ ಹಾಗೆ ನಿಜವಾಗಿಯೂ ಕಲ್ಲಾಗಿದ್ದು ನೋಡಿ ಕಣ್ಣೀರು ಸುರಿಸಿದ ಅಗಸ, ಆ ಕಲ್ಲಿನ ಮೇಲೆ ಬಟ್ಟೆ ಒಗೆಯೋದನ್ನ ರೂಢಿಸ್ಕೊಂಡ. ಹೀಗೆ ಸದಾ ತನ್ನ ಸಂಗಾತಿ ಜೊತೆ ಇರುವ ಸಮಾಧಾನ ಅವನದಾಗ್ತಿತ್ತು. ಮುಂದೆ ಊರಿನ ಜನ, ಹೊಳೆ ಹತ್ತಿರದ ಆ ಕಲ್ಲನ್ನ ‘ಅಗಸನ ಕಲ್ಲು’ ಅಂತ್ಲೇ ಕರೆದರು.

January 25, 2008

ಹೀಗೇ, ಕಥೆ ಹೇಳುವಾ ಅಂತ….

Filed under: ನಿಮ್ಮೊಂದಿಗೆ — jeevadani @ 8:46 am

ಹೆಲೋ!

ನಾವು ಇವತ್ತು ತಾನೇ ಇಂಥದೊಂದು ಪೋಸ್ಟ್ ಹಾಕಬೇಕು ಅಂತ ಡಿಸೈಡ್ ಮಾಡಿದ್ವಿ. ಅಷ್ಟರಲ್ಲೇ ಟೀನಾ ಮುದ್ದಾಗಿ ಗದರಿಬಿಟ್ಟಿದ್ರು!

ಇರಲಿ. ಜೀವದನಿ ಮತ್ತೆ ತನ್ನ ಸದ್ದು ಕೇಳಿಸ್ಲಿಕ್ಕೆ ತಯಾರಾಗ್ತಾ ಇದೆ.
ಆದ್ರೆ, ಈ ಸಾರ್ತಿ ನಮ್ಮ ಥೀಮ್ ನಲ್ಲಿ ಕೊಂಚ ಬದಲಾವಣೆ. ನಿಮ್ಮನ್ನ ಹಾಗೇ ಕೂರಿಸ್ಕೊಂಡು ಒಂದಷ್ಟು ಕಥೆಗಳನ್ನ ಹೇಳುವಾ ಅಂತ! ಹಾಗೇ ಹಳೆಯ ’ಗಂಡಸ್ರ ಗೋಳು’ ಮುಂದುವರೆಯಲಿದೆ. ಉಳಿದ ಕಾಲಂ ಲೇಖಕರೆಲ್ಲ ಕೈ ಕೊಟ್ಟು ಬಿಟ್ಟಿದಾರೆ! ಹೀಗಾಗಿ, ಹಳೆಯ ಇನ್ಯಾವ ಕ್ಯಟಗರಿಯೂ ಇನ್ನು ಇರೋಲ್ಲ. ಕವಿತೆ, ಅನುವಾದಗಳು ಆಗೀಗ ಹಣಕಬಹುದಷ್ಟೆ!
ನಾವೆಲ್ಲ ಬೆಳೀವಾಗ ಅದೆಷ್ಟು ಕಥೆಗಳನ್ನ ಕೇಳಿಲ್ಲ, ಅದೆಷ್ಟು ಕಥೆ ಕಟ್ಟಿ ಹೇಳಿಲ್ಲ!? ಇವತ್ತಿನ ಧಾವಂತದಲ್ಲಿ ಅವೆಲ್ಲ ಮರೆತೇಹೋಗ್ಬಿಟ್ಟಿದೆ ಅಲ್ವಾ?
ಅದ್ಕೇ ನಾವೀಗ ಅಂಥ ಕಥೆಗಳನೆಲ್ಲ ಗುಡ್ಡೆ ಮಾಡ್ಕೊಂಡು ಕೂತಿದೀವಿ. ನೀವೂ ಇದರಲ್ಲಿ ಸಾಥ್ ಕೊಡ್ತೀರ?

ನಾವು ಇವನ್ನೆಲ್ಲ ಹೇಳಬೇಕೂಂತ ಇದೀವಿ…

ಪುರಾಣಗಳ ಸಾವಿರ ಸಾವಿರ ಹೆಂಡತಿಯರ ರಾಜ, ಸಾವಿರ ಕೈಗಳ ವೀರ, ಮೈಯೆಲ್ಲ ಕಣ್ಣಿನ ದೇವೇಂದ್ರ, ಲಕ್ಷ ಲಕ್ಷ ವರ್ಷಗಟ್ಟಲೆ ಬಾಳಿದ, ರಾಜ್ಯವಾಳಿದ ಅರಸರು!! ಒಂದಕ್ಕಿಂತ ಒಂದು ರಸಕವಳದಂಥ ಕಥೆಗಳು.
ಜೊತೆಗೆ, ಬಾಯಿಂದ ಬಾಯಿಗೆ ಹರಿಯುತ್ತ ಹೊಸಹೊಸ ರೂಪ, ಆಯಾಮ ಪಡೆದುಕೊಳ್ತಾ ನಮ್ಮನ್ನ ಬೆರಗಿಗೆ ನೂಕೋ ಜಾನಪದ ಕಥೆಗಳು…
ನಮ್ಮ ದೇಶದಲ್ಲಿ ಆಗಿಹೋದ ಮಹಾಮಹಾತ್ಮರ ಕಥೆಗಳು….

ಹೆದರಿಕೊಳ್ಬೇಡಿ, ಎಲ್ಲ ಪುಟಾಣಿ ಪುಟಾಣಿಯಾಗೇ ಇರುತ್ತೆ!
ಹೇಳೋಕೆ ನಾವ್ ರೆಡಿ. ಕೇಳೋಕೆ ನೀವ್ ರೆಡೀನಾ?

ನಲ್ಮೆ,

ಜೀವದನಿ ಬಳಗ

November 20, 2007

’ಹಾಳಲ್ಲದ’ ಗಂಡಸು ಗಂಡಸೇ ಅಲ್ವಾ?

Filed under: ಗಂಡಸ್ರ ಗೋಳು! — jeevadani @ 5:58 pm

ನನಗೆ ಕ್ರಿಕೆಟ್ ಅಂದರೆ ಆರನೇ ಪ್ರಾಣ. ಪಂಚಪ್ರಾಣಗಳ ನಂತರದ ಸ್ಥಾನ ಅದಕ್ಕೇ. ಒಂದೇ ಕೊರತೆ ಅಂದ್ರೆ ಆಡಲಿಕ್ಕೆ ಬರೋಲ್ಲ! ಬೌಲಿಂಗ್ ಗೆ ನಿಂತರೆ ಎದುರಾಳಿಗಳಿಗೆ ಸುಗ್ಗಿ, ಬ್ಯಾಟಿಂಗ್ ಗೆ ಇಳಿದ್ರೆ, ನಮ್ಮವರಿಗೆ ಕಿರಿಕಿರಿ.ಆದರೂ ನಮ್ಮ ಟೀಮಿನ ಆಡದ ನಾಯಕ ನಾನು! ಹಾಗಂತ ಅವರೇನೂ ಸುಮ್ ಸುಮ್ನೆ ನನ್ನನ್ನ ನಾಯಕ ಮಾಡಿರ್ಲಿಲ್ಲ. ನಾನು ನಿಜವಾಗ್ಲೂ ಸ್ಟ್ರ್ಯಾಟಜಿ ಎಕ್ಸ್ ಪರ್ಟ್ ಆಗಿದ್ದೆ. ಯಾರಿಗೆ ಯಾವಾಗ ಬೌಲಿಂಗ್ ಕೊಡಬೇಕು? ಯಾರ ಕೈಗೆ ಬ್ಯಾಟ್ ಕೊಡಬೇಕು, ಯಾರಿಗೆ ಎಲ್ಲಿ ಚೆಂಡೆಸೆದರೆ ಮುಗ್ಗರಿಸುತ್ತಾರೆ? ಇವೆಲ್ಲವನ್ನೂ ನಾನೇ ನಿರ್ಧರಿಸ್ತಿದ್ದೆ. ಅದಕ್ಕೇ ನಾನಿಲ್ದಿದ್ರೆ ಅವರ್ಯಾರಿಗೂ ಕೈಕಾಲೇ ಆಡ್ತಿರಲಿಲ್ಲ.

ಹೀಗೆ ಕ್ರಿಕೆಟ್ ಆಡ್ಲಿಕ್ಕೇಂತಾನೇ ಮಂಡ್ಯಕ್ಕೆ ಹೋಗಿದ್ದು ನಾವು. ಸಾಯಂಕಾಲ ಏಳರ ಹೊತ್ತಿಗೆ ಆಟ ಮುಗಿಯಿತು. ರಾತ್ರಿ ಊರಿಗೆ ಹೋಗಿಬಿಟ್ಟರೆ ವಾಸಿ ಅಂತ ನಾನಂದೆ. “ಸುಮ್ನಿರೋ. ಫೀಲ್ಡಲ್ಲಿ ಬ್ಯಾಟಿಂಗ್ ಮಾಡಾಯ್ತು, ಈಗ ಹೋಟ್ಲಲ್ಲೂ ಸ್ವಲ್ಪ ಬ್ಯಾಟಿಂಗ್ ಮಾಡೋಣ” ಹಾಗಂದ ಮಂಜ. ಅವನು ಟೀಮಿನ ಬ್ಯಾಟ್ಸ್ ಮನ್. ಅವತ್ತಂತೂ ಆರಂಭದಲ್ಲಿ ಕ್ರೀಸಿಗೆ ಬಂದವನು ಟೀಂ ಗೆಲ್ಲೋವರೆಗೂ ಅಲ್ಲೇ ಇದ್ದ. ಅವನು ಚೆಂಡು ಮುಟ್ಟಿದರೆ ಅದು ಬೌಂಡರಿಯಾಚೆ! ಈಗ ಸಖತ್ತಾಗಿ ಹಸಿದಿರಬೇಕು, ಹೋಟೆಲಲ್ಲಿ ಭರ್ಜರಿಯಾಗಿ ಊಟ ಮಾಡೋಣ ಅಂತಿದಾನೆ ಇವನು ಅಂತಲೇ ನಾನು ’ಬ್ಯಾಟಿಂಗ್’ಗೆ ಅರ್ಥ ಕಟ್ಟಿಕೊಂಡಿದ್ದೆ. ನಾನು ಊಟ ಬೇಡ ಅಂದಿದ್ರೂ ಅವರೇನು ಕೇಳ್ತಿರಲಿಲ್ಲ. ಇಷ್ಟಕ್ಕೂ ನನ್ನ ಮಾತಿಗೆ ಬೆಲೆ ಇದ್ದದ್ದು ಗ್ರೌಂಡ್ ನಲ್ಲಿ ಮಾತ್ರವೇ ಹೊರತು ಅದರ ಹೊರಗಲ್ಲ!

ಟೇಬಲ್ಲಲ್ಲಿ ಊಟಕ್ಕೆ ಕುಳಿತವರು ಆಟವನ್ನ ಮೆಲುಕು ಹಾಕ್ತಿರುವಾಗ ಯಾರೋ ಮಂಜನ್ನ ಕೇಳಿದ್ರು, “ಅಲ್ಲೂ ಇಲ್ಲೂ ಎರಡೂ ಕಡೆ ಈ ಪರಿ ಬ್ಯಾಟಿಂಗ್ ಮಾಡ್ತೀಯ… ಸ್ಟ್ಯಾಮಿನಾ ಎಲ್ಲಿರುತ್ತೋ?” ಮಂಜ ನಗುತ್ತ, “ಬ್ಯಾಟಿಂಗ್ ನೆನೆಸ್ಕೊಂಡ್ರೇ ಸ್ಟ್ಯಾಮಿನಾ ಉಕ್ಕೇರುತ್ತೆ ಗೊತ್ತಾ?” ಅಂದಾಗ ನಾನು ತಲೆ ಆಡಿಸಿದೆ. ಅವನು ಒಂದು ಕುಟ್ಟಿ, “ಏನು ತಲೆ ಆಡಿಸ್ತೀಯ. ಇವತ್ತು ರಾತ್ರಿ ನಿಂಗೂ ಬ್ಯಾಟಿಂಗ್ ಕೊಡ್ತೀವಿ ಹೆದರಬೇಡ” ಅಂದ. ನನಗೆ ಒಂದೂ ಅರ್ಥವಾಗಲಿಲ್ಲ. ಬೆಳಗಿಂದ ಆಟವಾಡಿ, ಈಗ ತನೆ ಹೊಟ್ಟೆ ಬಿರಿಯ ತಿಂದು, ಮತ್ತೆ ಬ್ಯಾಟಿಂಗು ಅಂದ್ರೆ!?

ಅವರ ಮಾತುಗಳು ಮುಂದುವರಿದಂತೆ ಗೊತ್ತಾಗುತ್ತ ಹೋಯಿತು. ಅವರ ಬ್ಯಾಟಿಂಗ್ ಪಿಚ್ ಯಾವುದು ಅಂತ! ನಾನು ಕೆಟ್ಟದಾಗಿ ಸಿಕ್ಕಿಹಾಕಿಕೊಂಡೆ. ನನಗೆ ಇನ್ನೂ ಮರೆತಿಲ್ಲ. ಅದು ರೂಂ. ನಂ. ೪೦೭. ಮುಖದ ತುಂಬ ಪೌಡರು ಮೆತ್ತಿ, ಕೆಂಪು ಲಿಪ್ ಸ್ಟಿಕ್ಕು ಬಳಕೊಂಡಿದ್ದ ಹುಡುಗಿಬ್ಬಳು ಒಳಗೆ ಕುಳಿತಿದ್ದಳು. ತಲೆ ತುಂಬ ಸೇವಂತಿಗೆ ಹೂವು, ಸಾಮಾನ್ಯವಾದೊಂದು ಸೀರೆ. ನನ್ನ ಬ್ಯಾಟಿಂಗ್ ಕ್ಷೇತ್ರ!

art_modern_art-merello_transparent_portrait.jpg

ಟೀಮಿನ ಹುಡುಗರು ನನಗೆ ಪಾಠ ಮಾಡಿಯೇ ಕಳಿಸಿಕೊಟ್ಟಿದ್ದರು. ಪೋಲಿಪೋಲಿ ಮಾತುಗಳು ಇನ್ನೂ ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದವು. ಆದರೆ ಆಕೆಯನ್ನ ನೋಡುತ್ತಿದ್ದ ಹಾಗೇ ಎಲ್ಲವೂ ಮರೆತುಹೋದವು. ತಲೆ ತಗ್ಗಿಸಿಯೇ ಟೀವಿ ಹಾಕಿಕೊಂಡು ಕುಳಿತೆ. ಪುಟ್ಟಪುಟ್ಟ ಮಕ್ಕಳು ಎದೆತುಂಬಿ ಹಾಡ್ತಿದ್ರು.

ಐದು ಹತ್ತು ನಿಮಿಷ ಆಗಿತ್ತೇನೋ? ಆ ಹುಡುಗಿಗೂ ಅಸಹನೆ ಶುರುವಾಗಿರಬೇಕು. “ನನ್ನೇನು ನಿನ್ ಹೆಂಡ್ತಿ ಅಂದ್ಕೊಂಡ್ಯಾ? ಬೇಗ ಬೇಗ ಮುಗ್ಸು. ನೀನೊಬ್ನೇ ಸಾಕಾಗಲ್ಲ ನಂಗೆ!” ಅಂತ ಒರಟೊರಟಾಗಿ ಅಂದಳು.
“ಸಾಕಾಗಲ್ಲ ಅಂದ್ರೆ!?” ನಾನು ಅದುಹೇಗೆ ಬಾಯ್ಬಿಟ್ಟೆನೋ ಗೊತ್ತಿಲ್ಲ. ಅವಳ ದನಿಯಲ್ಲಿ ತಿರಸ್ಕಾರ, ಹತಾಶೆ, ನೋವು, ವಾಂಛೆ ಏನೇನೋ ಭಾವಗಳ ಮಿಶ್ರಣ, “ನೀ ಕೊಡೋ ಜುಜುಬಿ ಇನ್ನೂರು ರೂಪಾಯಿಗೆ ಕರ್ಚಿಪ್ಪು -ಬ್ರಾ ಕೂಡಾ ಬರಲ್ಲ. ಇನ್ನು ಸಂಸಾರ ಮಾಡೋದು ಹೇಗೆ ನಾನು?”

ಯಾಕೋ ಹೊಟ್ಟೆ ಕಿವುಚಿದಂತಾಯ್ತು. ಅವಳ ಮುಖ ಕೂಡ ಸರಿಯಾಗಿ ನೋಡದೆ ಅವಳು ಕುಳಿತಿದ್ದ ಮಂಚದ ತುದಿಯಲ್ಲಿ ಇನ್ನೂರು ರೂಪಾಯಿ ಇಟ್ಟು ಎದ್ದು ಹೊರಬಂದೆ. ಸೋಫಾದ ಮೇಲೆ ಹೊರಳಾಡಿ ಮೈ ನೋಯಿತೇ ಹೊರತು ನಿದ್ದೆ ಬರಲಿಲ್ಲ. ಮತ್ತೆ ಮತ್ತೆ ಬ್ಯಾಟಿಂಗ್ ಮಾಡೋ ಗಂಡಸರಿಂದಲೇ ಹೆಣ್ಣು ಮೈದಾನವಾದಳಾ? ಈ ಮೈ’ದಾನ’ದ ಹೆಣ್ಣುಗಳಿಗೆ ಎಂದಾದರೂ ಮದುವೆಯಾಗುತ್ತಾ? ಅಥವಾ ಇವರು ಈಗಾಗಲೇ ಮದುವೆ ಆಗಿ ನೊಂದು, ಹೊಟ್ಟೆಪಾಡಿಗೆ ಈ ಹಾದಿ ತುಳಿದವರಾ?
ಗಂಡನ ತೋಳತೆಕ್ಕೆಯಲ್ಲಿ ನುಲಿಯುತ್ತಾ ನಾನು ಇವತ್ತು ಕೆಲಸಕ್ಕೆ ಹೋಗಲ್ಲ ಅಂತ ಮೊಂಡಾಟ ಮಾಡೋ ಭಾಗ್ಯ ಅವರಿಗಿರತ್ತಾ? ಅಥವಾ ಜೀವನವಿಡೀ ಕಂಡಕಂಡವರ ತೋಳ ಹಸಿವಿಗೆ ಮೈಚಾಚೋದೇ ಅವರ ಕಾಯಕವಾಗಿಹೋಗತ್ತಾ?
ಹೀಗೇ… ಏನೇನೋ ಯೋಚನೆಗಳು…

ಈ ಪ್ರಶ್ನೆಗಳನ್ನೆಲ್ಲ ಅವಳ ಹತ್ತಿರವೇ ಕೇಳಲೇ ಅಂದುಕೊಂಡೆ. ಧೈರ್ಯ ಸಾಕಾಗಲಿಲ್ಲ. ಎಷ್ಟೆಂದರೂ ಆಡದ ನಾಯಕನಲ್ಲವೇ ನಾನು? ಬಿಡಿ. ಇಂಥ ಆಟ ಆಡೋದಕ್ಕಿಂತ ಆಡದಿರೋದೇ ಲೇಸು!

ಯೋಚಿಸುತ್ತಿರುವಾಗಲೇ ಮಂಜ ಹೊರಬಂದ. ನನ್ನ ಮುಖ ನೋಡಿಯೇ ಎಲ್ಲ ತಿಳಿದವನಂತೆ- “ಏನೋ ಇಷ್ಟ್ ಬೇಗ ಬಂದ್ಬಿಟ್ಟಿದೀ? ರಿಟೈರ್ಡ್ ಹರ್ಟಾ?” ಅಂದ. “ನೀನು ಗಂಡಸೇ ಅಲ್ಲ ಬಿಡು” ಅಂತಲೂ ಸೇರಿಸಿದ.
ನನ್ನ ಗಂಡೆದೆಯೊಳಗೂ ಹೆಣ್ಣು ಮನಸಿದೆ ಕಣೋ ಅನ್ನಬೇಕು ಅನಿಸ್ತು. ಹೆಣ್ಣನ್ನ ಭೋಗಿಸೋದೊಂದು ಆಟ ಅಂದ್ಕೊಂಡವನಿಗೆ ಅದೆಲ್ಲ ಅರ್ಥವಾಗದು ಅನಿಸಿ ಬಾಯ್ಮುಚ್ಚಿಕೊಂಡೆ.

“ಹಾಳು ಗಂಡಸರು!” ಹಾಗಂತಾರೆ ಹೆಣ್ಣುಮಕ್ಕಳು. “ಹಾಗೆ ’ಹಾಳು’ ಅಲ್ಲದವರು ಗಂಡಸರೇ ಅಲ್ಲ” ಅಂತಾರೆ ಗಂಡಸರು. ಹೀಗೆ ಗಂಡಸಾಗೋದಕ್ಕಿಂತ ಆಗದಿರೋದೇ ಒಳ್ಳೆಯದೆನಿಸಿತು. ಅವನ ಮೇಲೆ ಜಿಗುಪ್ಸೆ ಬಂದಂತಾಗಿ ಅಲ್ಲಿಂದೆದ್ದು ಹೊರಟೆ. ಹೊಟ್ಟೆ ತುಂಬಿಸಲಿಕ್ಕೆ ಮೈಮಾರಲು ಬಂದಿದ್ದ ಆ ಹುಡುಗಿ ಈಗ ಯಾರ ಮೈದಾನವೋ? ಯೋಚಿಸುತ್ತ ಉಳಿದೆ.

November 18, 2007

ಜಾನಕಿಗೊಂದು ಜಾದೂ ಕೀ ಜಪ್ಪಿ!!

Filed under: ಪಿಕ್ ಪಾಕೆಟ್ — jeevadani @ 6:32 am

-ಸುವ್ಯಕ್ತ

ಜೋಗೀ…….ನಾ ನಾ…..ಜಾನಕೀ…..!!

ಜಾನಕಿ ಅನ್ನೋ ಮೂರಕ್ಷರದ ಹೆಸರು ಮೂಡಿಸುವ ಭಾವ, ಹೆಜ್ಜೆಗುರುತಿಲ್ಲದ ಕಾಡಿನಲಿ ಹೆಸರಿಲ್ಲದ ಕವಿತೆಯ ಸಾಲೊಂದು ಕಾಡಿದಂತೆ. ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಬೇರೇನು ಇರುತ್ತೋ ಇಲ್ವೋ ಜಾನಕಿ ಕಾಲಂ ಮಾತ್ರ ಇರದಿದ್ದರೆ ಕೊಟ್ಟ ಹನ್ನೆರಡು ರೂಪಾಯಿ ಹುಂಡಿಗೆ ಹಾಕಿದ ಹಾಗಾಯಿತು ಅಂದುಕೊಳ್ಳುತ್ತಿದ್ದೆವು.

ಅತಿ ಸಾಮಾನ್ಯ ಓದುಗನ ಅಭಿವ್ಯಕ್ತಿಯಂತೆ ಶುರುವಾಗಿ ಗಾಢವಾದ ಅನುಭವ ಪ್ರಪಂಚವನ್ನು ಏನೂ ವಿಶೇಷ ಅಲ್ಲವೆಂಬಂತೆ ನಮ್ಮೆದುರಿಗೆ ತೆರೆದಿಡುತ್ತಿದ್ದ ಶೈಲಿಯೇ ಹೊಸತಾಗಿತ್ತು. ಅಲ್ಲಿವರೆಗೆ ವಿಮರ್ಶೆ, ಅರ್ಥವಾಗದ್ದನ್ನು ಅರ್ಥವಾಗದ ರೀತಿಯಲ್ಲಿ ತಮ್ಮ ಪಾಂಡಿತ್ಯ ಪ್ರದರ್ಶನಕ್ಕಾಗಿ ಬಳಸಿಕೊಳ್ಳುವ ಪ್ರಾಕಾರವಾಗಿ ಕಂಡಿತ್ತು. ವಿಮರ್ಶೆ ಓದುವುದಕ್ಕೇ ಹೆದರಿಕೆಯಾಗುತ್ತಿತ್ತು. ಈಗಲೂ ಅಷ್ಟೇ, ಎಷ್ಟೋ ವಿಮರ್ಶೆಗಳನ್ನು ಓದಿದರೆ ಗೊಂದಲವಾಗುತ್ತದೆ. ವಿಮರ್ಶೆಯನ್ನೂ ವಿಮರ್ಶಾ ದೃಷ್ಟಿಯಿಂದ ಪರಿಶೀಲಿಸಿ ಅರ್ಥ ಮಾಡಿಕೊಳ್ಳುವ ದೌರ್ಭಾಗ್ಯ ಓದುಗನದ್ದು. ಅಥವ, ವಿಮರ್ಶೆಗಳು ಸಾಮಾನ್ಯ ಓದುಗರಿಗಲ್ಲ!.

ಈಗಲೂ ಜಾನಕಿಯ ಬರಹಗಳನ್ನು ವಿಮರ್ಶೆಯೆಂದು ಸಾಹಿತ್ಯ ಪಂಡಿತರು ಒಪ್ಪದೇ ಇರಬಹುದು. ಒಂದು ರೀತಿಯಲ್ಲಿ ಅದು ನಿಜವೂ ಹೌದು. ಆದರೆ, ಸಾಹಿತ್ಯಾಸಕ್ತಿಯನ್ನು ಹುಟ್ಟುಹಾಕುವಲ್ಲಿ ಅವರ ಕೊಡುಗೆ ಯಾವುದೇ ವಿಮರ್ಶಕನಿಗಿಂತ ಹೆಚ್ಚು. ಕವಿತೆಗಿರಬೇಕಾದ ಲಯದ ಬಗ್ಗೆ, ಕತೆಗಳಿಗೆ ಬೇಕಾದ ಹೊಸತನದ ಬಗ್ಗೆ, ಹಳತನ್ನೇ ಬರೆಯುವ ಹೊಸ ಬರಹಗಾರರ ಬಗ್ಗೆ, ಹೊಸ ಚಿಂತನೆಗೆ ತೆರೆಯದ ಹಳೆಯ ಬರಹಗಾರರ ಬಗ್ಗೆ ಅಲ್ಲಿ ಪ್ರಕಟವಾಗುತ್ತಿದ್ದ ಮುಕ್ತ ಸರಳ ಅಭಿಪ್ರಾಯಗಳು ಯಾರದೋ ಘನತೆಯ ಪ್ರತಿಭೆಯ ಪರಿಮಾಣವನ್ನು ನಿಗದಿಪಡಿಸುವಂತದ್ದಲ್ಲ. ಒಂದು ಪುಸ್ತಕ ಓದಿದ ನಂತರ ಈಸೀ ಚೇರಿನಿಂದ ಎದ್ದು, ಮೈಮುರಿದು, ಅರಳಿರುವ ಹೂವನ್ನು ಮುಟ್ಟಿ ಸುಮ್ಮನೇ ಪ್ರೀತಿಸಿದಂತೆ. ಅನಿಸಿದ್ದನ್ನು ಸ್ನೇಹಿತನಿಗೆ ತಿಳಿಸಿದಂತೆ.

ಲೇಖನಗಳು, ಕತೆಗಳು, ಕಾದಂಬರಿ, ಸೀರಿಯಲ್ಲು, ಸಿನಿಮಾ, ಪತ್ರಿಕೆ, ಬ್ಲಾಗು ಯಾವುದೇ ಇರಬಹುದು…..ಜೋಗಿ ಅನ್ನುವುದಕ್ಕಿಂತ, ಒಂದೇ ಒಂದು ಕವಿತೆಯನ್ನೂ ಬರೆಯದೆ ಕವಿತೆಯ ಬಗ್ಗೆ ಬರೆಯುವ ಜಾನಕಿಯೇ ನಮಗಿಷ್ಟ. ಅವರೇ ಹೇಳುವಂತೆ- ‘ಕವಿತೆ ಬರೆಯದೆಯೇ ಕವಿಯಾಗಿ ಉಳಿಯುವುದು ಲೇಸು’. ಜಾನಕಿ ಒಂದು ಜೀವಂತ ಕವಿತೆಯಾಗುವುದು ಹೀಗೆ.

ಪ್ರಿಯರಾದವರ ಬಗ್ಗೆ ಬರೆಯಲು ಹೋದರೆ ಅಕ್ಷರಗಳು ಮಾಯವಾಗುತ್ತವೆ. ಟೀಕೆ-ಅಸಮಾಧಾನಗಳು ಮರೆತುಹೋಗುತ್ತವೆ. ಎಷ್ಟೇ ಬರೆದರೂ ಜಾನಕಿಯ ಬಗ್ಗೆ ನಮಗಿರುವ ಪ್ರೀತಿಯನ್ನು ಇನ್ನೂ ಪೂರ್ತಿಯಾಗಿ ಸಮರ್ಪಕವಾಗಿ ತಿಳಿಸಲು ಸಾಧ್ಯವಾಗಿಲ್ಲವೇನೋ ಅಂತ ಅನಿಸುತ್ತದೆ. ಆದರೂ ಅಷ್ಟಿಷ್ಟು ಅಕ್ಷರಗಳ ಮೂಲಕ ಈ ಪ್ರೀತಿ. ಇವರನ್ನು ನೀವು ಭೇಟಿಯಾದರೆ ಒಂದು ಅಚ್ಚರಿಯ ಅನುಭವ ನಿಮ್ಮನ್ನು ಮುತ್ತದೆ ಇರಲಾರದು. ಯಾಕೆಂದರೆ, ಜಾನಕಿ ಮಣ್ಣಿನಲ್ಲಿ ಹುಟ್ಟಿದ ಮಗಳು.

November 14, 2007

ಎಲ್ಲಿ ಜಾರಿತೋ….

Filed under: ಪಿಕ್ ಪಾಕೆಟ್ — jeevadani @ 2:40 pm

ಇದು, ಗೆಳೆಯ ಸುವ್ಯಕ್ತನ ಬರಹ ಸಂಗ್ರಹದಿಂದ ಕದ್ದಿದ್ದು. ನನಗೇನೋ ಖುಷಿ ಕೊಟ್ಟಿತು. ಅದಕ್ಕೇ ಈಗ ನಿಮ್ಮೆದುರಿಡುತ್ತಿದ್ದೇನೆ. ಓದಿ, ನೀವೂ ಖುಷಿ ಪಡಿ. ಅಂದಹಾಗೆ, ಈ ಬರಹದಲ್ಲಿನ ವಿಷಯ ಸಂಭ್ರಮಿಸುವಂತದ್ದಲ್ಲ ಮತ್ತೆ! ನಾನು ಹೇಳಿದ್ದು ಬರಹದ ಶೈಲಿಯ ಬಗ್ಗೆ. ಅದರೊಳಗಿನ ಹೂರಣ, ನಾವೆಲ್ಲರೂ ಒಮ್ಮೆ ಯೋಚಿಸುವಂತೆ ಮಾಡುತ್ತದೆ. ನಾವು ಹಾಗೆ ಯೋಚಿಸಿದಾಗಲೇ ಅದಕ್ಕೂ ಸಾರ್ಥಕತೆ. ಅಲ್ಲವೇ?

 ಎಲ್ಲಿ ಜಾರಿತೋ….

ಸಿಡಿಲಿಗೆ ಕಂಗಾಲಾದ ಹೊಂಬಾಳೆಯಂತಿದ್ದಳು ಅವಳು…..

ಕೋಮಲಾಂಗಿ ಅನ್ನುವುದರ ಕಲ್ಪನೆ ನನ್ನಲ್ಲಿ ಮೂಡಿದ್ದೇ ಅವಳನ್ನು ಕಂಡ ಮೇಲೆ. ಆಗ ಅವಳು ಅಷ್ಟು ಪ್ರಸಿದ್ಧಳಾಗಿರಲಿಲ್ಲ. ನನಗಿನ್ನು ಸರಿಯಾಗಿ ಮೀಸೆ ಮೂಡಿರಲಿಲ್ಲ. ಟಿ.ವಿ ಟ್ರೈಲರ್ನಲ್ಲಿ ಅವಳ ಹೆಸರು ನೋಡಿದೆ. ಆ ಸಿನಿಮಾ ಬಂದದ್ದೂ ಗೊತ್ತಿಲ್ಲ ಹೋಗಿದ್ದೂ ಗೊತ್ತಿಲ್ಲ. ಅದು ಯಾವ ಸಿನಿಮಾದ ಟ್ರೈಲರ್ ಅನ್ನುವುದೂ ನೆನಪಿಲ್ಲ. ಯಾರೂ ಕ್ಯಾರೇ ಎನ್ನದ ಅವಳು, ನನ್ನ ಕನಸಿನಕನ್ಯೆ. ನೋಡೋಣವೆಂದರೆ ಪೇಪರಿನಲ್ಲಿ ಅವಳ ಫೋಟೋ ಕೂಡ ಹೆಚ್ಚಾಗಿ ಸಿಗುತ್ತಿರಲಿಲ್ಲ.

ಆಕೆಯನ್ನು ಮೊದಲ ಬಾರಿ ಕಂಡ, ಕಂಡು ಬಾಯಿ ತೆರೆದುಕೊಂಡು ಕಲ್ಲಾಗಿ ನಿಂತ ಆ ಕ್ಷಣದ ಚಿತ್ರ, ಸ್ಮರಣೆಯಲ್ಲಿ ಎಲ್ಲಾ ಬಣ್ಣಗಳ ಜೊತೆಯಲ್ಲಿ ಅಚ್ಚಾಗಿ ಉಳಿದಿದೆ. ಮುದ್ದು ಮುಖ, ಮುಗ್ಧ ಕಂಗಳು, ಗುಲಾಬಿ ಎಸಳಿನ ತುಟಿಗಳು, ನೇರ ತೀಡಿದ ಮೂಗು, ಹಾಲಿಗಿಂತಲೂ ಬಿಳುಪಾದ, ರೇಶಿಮೆಗಿಂತಲೂ ನುಣುಪಾದ ದೇಹ. ಕಡುಗೆಂಪು ಗುಲಾಬಿ ಬಣ್ಣದ ಸೀರೆ. ಸೀರೆಯ ಮರೆಯಲ್ಲಿ ಬರೀ ಗುಲಾಬಿ ಮೊಗ್ಗುಗಳೇ ಕೂಡಿಕೊಂಡು ಹೆಣೆದ ಲೋಕವನ್ನೇ ಕಂಗಾಲುಗೊಳಿಸಬಲ್ಲ ಹರೆಯ. ಮೊದಲೇ ಹೇಳಿದಂತೆ, ನನ್ನಲ್ಲಿ ಕೋಮಲಾಂಗಿ ಎನ್ನುವ ಕಲ್ಪನೆ/ಶಬ್ದ/ಅರ್ಥ ರೂಪುಗೊಂಡು, ಅದು ಇವಳೇ ಸರಿ ಅಂತ ಅನಿಸಿದ ಗಳಿಗೆ ಅದು. ನನಗೆ ನಯಾ ಪೈಸೆಯ ಲಾಭ ಇರದಿದ್ದರೂ ಇಷ್ಟು ಮುದ್ದಾದ ಮುಖದ ಇವಳನ್ನು ಅವಕಾಶ, ಅದೃಷ್ಟ, ಗೆಲುವು ಅರಸಿ ಬರಲಿ; ಇನ್ನಷ್ಟು ಮಿಂಚಲಿ ಅಂತ ಆಸೆ ಪಟ್ಟಿದ್ದೆ. ಅವಳ ಸಿನಿಮಾಗಳು ಹಿಟ್ ಆಗಲಿಲ್ಲ.

ಯಾಕೋ ಗೊತ್ತಿಲ್ಲ, ಮೊನ್ನೆ ಪೇಪರಿನಲ್ಲಿ ಅವಳ ಕಂಗಳನ್ನು ಕಂಡ ಮೇಲೆ ಏನೋ ಒಂದು ರೀತಿಯ ಚಡಪಡಿಕೆ. ದೇಶದ್ರೋಹಿಗಳೊಡನೆ ದೇಶ ಬಿಟ್ಟು ಓಡಿಹೋದವಳು, ಇಂತವರಿಗೆಲ್ಲ ಏನ್ರೀ ಅನುಕಂಪ. ಸಿಕ್ಕಾಪಟ್ಟೆ ದುಡ್ಡಿರುತ್ತೆ. ಈಗ ಇನ್ನೊಂದಿಷ್ಟು ಹೆಸರು ಬಂದಿದೆ. ಸೀರಿಯಲ್ಲು, ಬ್ಯೂಟಿ ಪಾರ್ಲರ್, ಅದೂ ಇದೂ ಅಂತ ಇನ್ನಷ್ಟು ಮೆರೀತಾರೆ. ಅವರಿಗೇನು ಪಶ್ಚಾತ್ತಾಪ ಇರುತ್ತೆ ಅಂದ್ಕೊಂಡಿದೀರಾ? - ಅಂತ ನಿಮ್ಮಂತೆ ನನಗೂ ಸಿಟ್ಟು ಬರುತ್ತದೆ. ಆದರೆ, ಅವತ್ತೇಕೋ ಅವಳ ಮುಖದಲ್ಲಿ ದೈನ್ಯತೆ ಇತ್ತು. ತಪ್ಪು ಮಾಡಿಬಿಟ್ಟೆ ಅನ್ನುವ ಭಾವವಿತ್ತು. ಹೀಗೆಲ್ಲ ಭಾವಿಸುವಂತೆ ನನ್ನೆದೆಯಲ್ಲಿ ಪ್ರೀತಿಯಿತ್ತು. ಯಾಕೋ, ‘ಸಾಯ್ಲಿ ಮುಂಡೆವು’ ಅಂತ ಮರೆಯುವುದಕ್ಕೆ ಸಾಧ್ಯವಾಗುತ್ತಿಲ್ಲ.

ಅವಳು ನನ್ನ ಪ್ರೀತಿಯ ಹೊಂಬಾಳೆ- ಮೋನಿಕಾ ಬೇಡಿ!.

29monika.jpg

ಆ ನಟಿ ಆತ್ಮಹತ್ಗೆ ಪ್ರಯತ್ನಿಸಿದಳು, ಮತ್ತೊಬ್ಬಳು ಭೂಗತಳಾದಳು, ಇವಳಂತೂ ತೀರ ಕಾಲ್ ಗರ್ಲ್ ಆಗಿಹೋದಳು…ಈ ಸುದ್ದಿಗಳನ್ನೆಲ್ಲ ಕೇಳಿದಾಗ ನಿಮಗೇನನಿಸುತ್ತೋ ಗೊತ್ತಿಲ್ಲ. ನನಗಂತು ಕರುಳು ಹಿಂಡಿದ ಹಾಗಾಗುತ್ತೆ.

ಈ ಮುದ್ದಾದ ಹುಡುಗಿಯರಿಗೆಲ್ಲ ಅದೇನು ರೋಗ ಬಂದಿರುತ್ತೋ ಗೊತ್ತಿಲ್ಲ. ಸುಮಾರು ಎರಡು ವರ್ಷದ ಹಿಂದೆ ನಮ್ಮೂರಿನಲ್ಲೂ ಹೀಗೇ ಆಗಿತ್ತು. ಇಡೀ ಊರಿನಲ್ಲಿ ಹಾರ್ಟ್ ಆಪರೇಶನ್ ಮಾಡಬಲ್ಲ ಏಕೈಕ ಡಾಕ್ಟರ್ ಶಾರದಾಪ್ರಸದ್. ಅವರ ಮುದ್ದಿನ ಮಗಳು ಮುದ್ದಾದ ಪ್ರಾರ್ಥನಾ ಕಣ್ಮರೆಯಾದಳು. ಆಟೋ ಡ್ರೈವರ್ ಶಿವನ ಜೊತೆ ಓಡಿಹೋಗಿದ್ದಾಳೆ ಅಂತ ನನಗೂ ಅವರಿವರಿಂದ ಕೇಳಿ ಗೊತ್ತು. ಓಡಿಹೋಗಿದ್ದನ್ನು ನಾನೇನು ಕಣ್ಣಾರೆ ನೋಡಿರಲಿಲ್ಲ ಎನ್ನಿ. ಆದರೂ, ಊರಿನವರ ಮಾತಿನಲ್ಲಿ ನಂಬಿಕೆ ಇಟ್ಟು ಈ ಗುಟ್ಟನ್ನು ನಿಮಗೆ ಹೇಳುತ್ತಿದ್ದೇನೆ.

ಪ್ರಾರ್ಥನ ನಮ್ಮ ಮನೆ ರಸ್ತೆಯಲ್ಲಿ ತಲೆ ಬಗ್ಗಿಸಿಕೊಂಡು ನಡೆದು ಕಾಲೇಜಿಗೆ ಹೋಗುವಾಗ ಅಕ್ಕಪಕ್ಕ ಮನೆಯವರು ಯಾರೂ ಇಲ್ಲದಾಗ ಅವಳನ್ನು ಕಣ್ತುಂಬ ನೋಡುತ್ತಿದ್ದೆ. ಅವಳು ಆಟೋ ಶಿವನೊಂದಿಗೆ ಓಡಿಹೋದಳು ಅನ್ನುವುದನ್ನು ಕೇಳಿ ನನಗೆ ಮೈಯೆಲ್ಲ ಉರಿದುಹೋಗಿತ್ತು. ಓಡಿಹೋಗಿ ಎರಡು ತಿಂಗಳ ನಂತರ ಅವಳು ಹಿಂದಿರುಗಿ ಬಂದದ್ದು ಊರವರಿಗೆಲ್ಲ ಮತ್ತೂ ದೊಡ್ಡ ಸುದ್ದಿ. ನಮ್ಮ ಮನೆಯಲ್ಲು ಆ ವಿಚಾರ ಎತ್ತುತ್ತಿದ್ದರು. ಆಗೆಲ್ಲ ನಾನು ‘ಆ ತಲೆಬಿಸಿ ನಮಗ್ಯಾಕೆ?’ ಅಂತ ಜೋರಿನಲ್ಲಿ ಹೇಳಿ ಅಲ್ಲಿಗೇ ನಿಲ್ಲಿಸುತ್ತಿದ್ದೆ. ರಾಘವೇಂದ್ರನ ಟೀ ಅಂಗಡಿಯಲ್ಲಿ, ರಫೀಕನ ಸೈಕಲ್ ಶಾಪಿನಲ್ಲಿ, ದಿನಸಿ ಅಂಗಡಿ ದಿನೇಶನ ಬಾಯಲ್ಲಿ, ಎಲ್ಲರ ಬಾಯಲ್ಲೂ ಅವಳ ಬಗ್ಗೆಯೇ ಮಾತು. ಓಡಿಸಿಕೊಂಡು ಹೋದ ಆ ಪುಣ್ಯಾತ್ಮ ಶಿವ ಈಗ ಯಾವ ಕೈಲಾಸದಲ್ಲಿದ್ದಾನೋ ಯಾರಿಗೂ ಗೊತ್ತಿಲ್ಲ (ಅವನು ಅವಳನ್ನು ಓಡಿಸಿಕೊಂಡು ಹೋದನೋ, ಅವಳು ಅವನನ್ನು ಓಡಿಕೊಂಡು ಹೋದಳೋ, ಇಬ್ಬರೂ ಒಬ್ಬರನ್ನೊಬ್ಬರು ಓಡಿಸಿಕೊಂಡು ಹೋದರೋ…..ಸರಿಯಾದ ಮಾಹಿತಿ ಇಲ್ಲ) . ಅವನ ವಿಷಯ ನೆನಪಾದಾಗ ಪ್ರಾರ್ಥನಳ ವಿಷಯ ಬಂದಾಗೆಲ್ಲ ಎಲ್ಲರಲ್ಲೂ ಅವನ ಬಗ್ಗೆ ಮೂಡುತ್ತಿದ್ದ ಏಕಾಭಿಪ್ರಾಯ ಎಂದರೆ- ‘ಒಳ್ಳೆ ಮಜಾ ಮಾಡ್ದ ಬಡ್ಡೀಮಗ…’. ಇನ್ನು ಅವಳ ಬಗ್ಗೆ- ‘ಓಡಿ ಹೋದ್ಳಲ್ಲ, ಆಗ ಜ್ಞಾನ ಇರ್ಲಿಲ್ವಾ? ……ಉಪ್ಪು ತಿಂದ ಮೇಲೆ….ಹಾಂಗೆ ಆಗ್ಬೇಕು….’. ಈ ಮಾತುಗಳಿಗೆಲ್ಲ ನನ್ನಲ್ಲೊಂದು ತಿರಸ್ಕಾರ ಬೆಳೆದಿತ್ತು.

ಮೊದಲೇ ತಲೆ ಬಗ್ಗಿಸಿಕೊಂಡು ನಡೆಯುತ್ತಿದ್ದ ಹುಡುಗಿ ಅವಳು. ಇಷ್ಟೆಲ್ಲ ಆದಮೇಲೆ ಊರಿನವರ ಮುಂದೆ ತಲೆ ಎತ್ತಿದ್ದೇ ಇಲ್ಲ.  ಆಮೇಲೆ ಕಾಲೇಜಿಗೂ ಹೋಗಲಿಲ್ಲ. ಮನೆಯಿಂದ ಹೊರಗೂ ಹೆಚ್ಚಾಗಿ ಬರುತ್ತಿರಲಿಲ್ಲ. ಆಟೋ ಶಿವ ಅವಳನ್ನು ಬಳಸಿಕೊಂಡಿರಬಹುದು, ಊರಿನವರು ಹೇಳುವಂತೆ ಮಜಾ ಕೂಡ ಮಾಡಿರಬಹುದು, ಇದ್ದಕ್ಕಿದ್ದಂತೆ ಕಾಣೆಯಾಗಿ ಅವಳೊಬ್ಬಳನ್ನೇ ಬಿಟ್ಟುಹೋಗಿ ಬಹಳ ಕೀಳಾಗಿ ನಡೆಸಿಕೊಂಡಿರಬಹುದು. ಆದರೆ, ಆ ಚೌತಿ ಹಬ್ಬದಂದು ಗಣಪತಿ ದೇವಸ್ಥಾನಕ್ಕೆ ಅವಳು ಬಂದಾಗ, ಹುಡುಗರು ಮೈಯನ್ನೆಲ್ಲ ಕಣ್ಣು ಮಾಡಿಕೊಂಡು ಅವಳನ್ನು ನಿಜವಾಗಿಯೂ ಸಾರ್ವಜನಿಕವಾಗಿ ಸಾಮೂಹಿಕ ಬಲಾತ್ಕಾರ ಮಾಡಿಬಿಟ್ಟರು. ಇವರ ಜೊತೆ ಏನಾದರು ಅವಳು ಓಡಿಹೋಗಿದ್ದರೆ ಆಟೋ ಶಿವನಿಗಿಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದರೋ ಏನೋ!.

ಹೀಗೆ ಊರಿಗೊಂದು ಕತೆಯಾಗಿದ್ದ ಪ್ರಾರ್ಥನಳಿಗೆ ಮದುವೆ ಆಯ್ತು ಅಂತ ಹೋದ ವರ್ಷ ಕೇಳಿದೆ. ಮುಂಬೈ ಕಡೆಯ ಹುಡುಗನಂತೆ. ಸಂಬಂಧಿಕನಲ್ಲ, ಪರಿಚಯಸ್ಥನೂ ಅಲ್ಲ. ಡಾಕ್ಟರ್ ಶಾರದಾಪ್ರಸಾದರ ಯಾರೋ ಮುಂಬೈ ಡಾಕ್ಟರ್ ಗೆಳೆಯನ ಮೂಲಕ ಇತ್ಯರ್ಥವಾದ ಸಂಬಂಧ. ಮದುವೆಯನ್ನೂ ಮುಂಬೈನಲ್ಲೇ ಮಾಡಿದರಂತೆ. ನಮ್ಮೂರಿನ ಯಾರಿಗೂ ಹೇಳಿಕೆ ಬರಲಿಲ್ಲ. ತೀರ ಹತ್ತಿರದ ಸಂಬಂಧಿಕರನ್ನು ಮಾತ್ರ ಕರೆದಿದ್ದರಂತೆ. ಮದುವೆ ಮುಗಿದು ಮಗಳನ್ನು ಬಿಟ್ಟು ಬರುವವರೆಗೆ ಸಂಬಂಧಿಕರಿಗೆ ಹುಡುಗನೊಟ್ಟಿಗೆ ಹೆಚ್ಚಿಗೆ ಮಾತಾಡುವ ಅವಕಾಶ ಸಿಗದಂತೆ ಕಾಯುತ್ತಿದ್ದರಂತೆ. ಮನೆಯ ಒಬ್ಬರಲ್ಲ ಒಬ್ಬರು ಹುಡುಗನೊಂದಿಗೆ ಇದ್ದೇ ಇರುತ್ತಿದ್ದರಂತೆ. ಈಗ ಸುಖವಾಗಿ ಸಂಸಾರ ಮಾಡಿಕೊಂಡಿದ್ದಾರೆ. ಒಂದು ಮಗುವೂ ಆಗಿದೆ ಅಂತ ಅಮ್ಮ ಹೇಳಿದಳು. ನನಗೇನೋ ಒಂದು ರೀತಿಯ ಸಮಾಧಾನ.

ಮೋನಿಕಾ ಬೇಡಿ ಸಿನಿಮಾದಲ್ಲಿ ನಟಿಸುತ್ತಾಳಂತೆ ಎನ್ನುವ ಸುದ್ದಿ ಬಂದಿದೆ. ಏನೂ ನಡದೇ ಇಲ್ಲವೇನೋ ಅನ್ನುವ ಹಾಗಿತ್ತು ಅವಳ ನಿಲುವು. ತಾನು ಅಬು ಸಲೇಮನನ್ನು ಮದುವೆ ಆಗಿರಲಿಲ್ಲ ಅಂದಿದ್ದಾಳೆ. ಹೀಗೆ ಹೇಳಿದ ಉದ್ದೇಶ ಮುಂದೆ ಸಂಗಾತಿಯೊಬ್ಬ ಸಿಗಬಹುದೆಂಬ ನಿರೀಕ್ಷೆಯಾ? ಅವನ ಕೃತ್ಯಗಳಿಂದಾಗಿ ತನಗೆ ಬರಬಹುದಾದ ಅಪಾಯದಿಂದ ತಪ್ಪಿಸಿಕೊಳ್ಳುವ ಉಪಾಯವಾ? ನಿಕೃಷ್ಟವೆನಿಸಿದ ಸಂಬಂಧ ಒಂದರಿಂದ ಕಳಚಿಕೊಂಡಿದ್ದೀನಿ ಎನ್ನುವ ಸೂಚನೆಯಾ? ಅದೊಂದು ತಪ್ಪು ಹೆಜ್ಜೆ ಅವನೊಬ್ಬ ತಪ್ಪು ಆಯ್ಕೆ ಅಥವ ನನಗೆ ಆಯ್ಕೆ ಎಂಬುದೇ ಇರಲಿಲ್ಲವೆಂದು ಹೇಳಿ ಅವನೆದುರು ಹಾರಿಸಿದ ಧಿಕ್ಕಾರದ ಭಾವುಟವಾ?

ಏನೋ….ಅವರಿವರು ಹೇಳಿದ್ದನ್ನೆಲ್ಲ ಕೇಳಿ ಹಾಗೇ ಹೀಗೇ ಅಂತ ಮಾತಾಡುವುದಷ್ಟೆ ನಾವು-ನೀವು. ನಮ್ಮ ಮಾತಿನ ಬಲೆಯಲ್ಲೇ ನರಳದೆ, ಗಿಡುಗನ ಕೈಗೆ ಸಿಕ್ಕಿ ನಲುಗಿದ ಗುಬ್ಬಚ್ಚಿಗಳೆಲ್ಲ ಅವರವರ ಗೂಡು ಸೇರಿಕೊಳ್ಳಲಿ. ಗಿಡುಗನಂತಹ ಹೆಣ್ಣನ್ನು ನೀವು ಕಂಡಿದ್ದೀರಾ? ನಾನಂತೂ ಕಂಡಿಲ್ಲ. ಇದ್ದರೆ, ಹಾಳಾಗಿಹೋಗಲಿ ಬಿಡಿ.

Next Page »

Blog at WordPress.com.